ಧಾರವಾಡ prajakiran.com :
ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಶಿವಪ್ಪ ಎಫ್ ಪಡೆಪ್ಪನವರ ತನ್ನ ಬದಲಾಗಿ ಬೇರೆಯವರನ್ನು ದೈಹಿಕ ಸಾಮರ್ಥ್ಯ ಮತ್ತು ದೇಹದಾಢ್ರ್ಯತೆ ಪರೀಕ್ಷೆ [ET/PST] ಗೆ ಕೂಡಿಸಿ ವಂಚನೆ ಎಸಗಿದ್ದಾನೆ ಎಂದು ಧಾರವಾಡ ಎಸ್ಪಿ ಕೃಷ್ಣಕಾಂತ ತಿಳಿಸಿದ್ದಾರೆ.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧಾರವಾಡ ಜಿಲ್ಲಾ ಪೊಲೀಸ್ ಘಟಕದ ಸಶಸ್ತ್ರ ಮೀಸಲು ಪೊಲೀಸ್ ಪೇದೆ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಯಲ್ಲಿ ಎಪಿಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿ ಶಿವಪ್ಪ ಎಫ್ ಪಡೆಪ್ಪನವರ ಅರ್ಜಿ ಸಂಖ್ಯೆ 9818476 ರೋಲ್ ನಂ. 8753431 17-03-2021ರಂದು ನೇಮಕಾತಿ ಆದೇಶ ಪಡೆದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾನೆ.
ಈ ಅಭ್ಯರ್ಥಿ ಕರ್ತವ್ಯಕ್ಕೆ ವರದಿ ಮಾಡಿದ ನಂತರ ಪೊಲೀಸ್ ಅಧೀಕ್ಷಕರು ಧಾರವಾಡ ನೇಮಕಾತಿ ಸಂದರ್ಭದಲ್ಲಿ ಪಡೆದ ಬೆರಳು ಮುದ್ರೆಗಳನ್ನು ಪರಿಶೀಲಿಸಿದಾಗ ಎಡಗೈ ಹೆಬ್ಬರಳಿನ ಮುದ್ರೆಯೊಂದಿಗೆ ಹೊಂದಾಣಿಕೆಯಾಗಿರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ವರದಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನೇಮಕಾತಿ ಹೊಂದುವ ಉದ್ದೇಶದಿಂದ ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸುವ ಉದ್ದೇಶದಿಂದ ಮಂಜುನಾಥ ಕರಿಗಾರನನ್ನು ಸಂಪರ್ಕಿಸಿದ್ದಾನೆ.
ಆತ ಬಸವರಾಜ ಮೇಲ್ಮಟ್ಟಿ ಸಾ: ನಲ್ಲನಟ್ಟಿ ತಾ: ಗೋಕಾಕ ನೇತೃತ್ವದ ತಂಡದವರು ಈ ಕೆಲಸದಲ್ಲಿ ಸಹಾಯ ಮಾಡುತ್ತಾರೆ ಎಂದು ಪರಿಚಯಿಸಿದ್ದಾನೆ.
ನಂತರ ಶಿವಪ್ಪನು, ಬಸವರಾಜ ಮೇಲ್ಮಟ್ಟಿ ಬದಲಿ ಒಬ್ಬನನ್ನು ನಿಲ್ಲಿಸಿ ಪರೀಕ್ಷೆ ಪಾಸ್ ಮಾಡಿಕೊಡಲು ಕೇಳಿಕೊಳ್ಳುತ್ತಾನೆ ಅದಕ್ಕೆ ಮೇಲ್ಮಟ್ಟಿಯು 2,30,000/- ರೂಪಾಯಿ ಪಡೆದುಕೊಂಡಿದ್ದಾನೆ.
ಈ ಗುಂಪಿನಲ್ಲಿರುವ ಬಸವರಾಜ ದೇವರಮನಿ 1,95,000/- ರೂಗಳು, ಆನಂದ ಕೋಳೂರ 30,000/- ರೂಗಳನ್ನು ಹಂಚಿಕೊಂಡಿರುತ್ತಾರೆ.
ಆ ಗುಂಪು ಆನಂದ ಕೋಳೂರು ನನ್ನು ಶಿವಪ್ಪ ಎಫ್ ಪಡೆಪ್ಪನವರ ಬದಲಿಗೆ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ಮಾಡಿ ಅರ್ಹತೆ ಪಡೆದಿದ್ದು ನೇಮಕಾತಿ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾನೆ.
ಈ ಪ್ರಕರಣದ ಆರೋಪಿ ಆನಂದ ಕೋಳೂರ ಹಾಸನದ ನಗರದ ಬಡವಾಣೆ ಠಾಣೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಸರ್ಕಾರಕ್ಕೆ ವಂಚಿಸಿ ಬೇರೆ ವ್ಯಕ್ತಿಯನ್ನು ತನ್ನ ಬದಲಾಗಿ ಹಾಜರಾಗಿ ಸಹಿ ಮಾಡುವಂತೆ ದೈಹಿಕ ಪರೀಕ್ಷೆಗೆ ಹಾಜರಾಗಲು ದುಷ್ಪ್ರೇರಣೆ ನೀಡಿದ್ದು, ಅದರಂತೆ ಬೇರೆ ವ್ಯಕ್ತಿ ಶಿವಪ್ಪ ಎಫ್ ಪಡೆಪ್ಪನವರ ಇತನ ಹೆಸರಿನಲ್ಲಿ ದೈಹಿಕ ಪರೀಕ್ಷೆಗೆ ಹಾಜರಾಗಿ ತಾನೇ ನೈಜ ಅಭ್ಯರ್ಥಿ ಎಂದು ನಂಬಿಸಿದ್ದಾನೆ.
ಸುಳ್ಳು ದಾಖಲಾತಿಗಳನ್ನು ನೀಡಿ ವಂಚನೆ ಎಸಗಿ ಶಿವಪ್ಪ ಎಫ್ ಪಡೆಪ್ಪನವರ ಇತನು ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಕಾರಣರಾಗಿ ಮೋಸ ವಂಚನೆ ಅಪರಾಧ ಎಸಗಿರುವುದು ದಾಖಲಾತಿಗಳಿಂದ ಕಂಡುಬಂದಿದ್ದು, ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ನೀರೀಕ್ಷಕರು ಉಪ-ನಗರ ಪೊಲೀಸ್ ಠಾಣೆ, ಧಾರವಾಡ ರವರಲ್ಲಿ ದೂರು ಸಲ್ಲಿಸಲಾಗಿದೆ ಎಂದು ಕೃಷ್ಣಕಾಂತ ತಿಳಿಸಿದ್ದಾರೆ.