ಚಿಕ್ಕಮಗಳೂರು prajakiran.com: ವಿಧಾನ ಪರಿಷತ್ ಉಪ ಸಭಾಪತಿಯಾಗಿದ್ದ ಎಸ್. ಎಲ್. ಧರ್ಮೆಗೌಡ ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂಜೆ ಆರುಗಂಟೆಗೆ ಸಖರಾಯಪಟ್ಟಣದಿಂದ ಗುಣಸಾಗರಕ್ಕೆ ಕಾರಿನಲ್ಲಿ ಚಾಲಕನೊಂದಿಗೆ ಬಂದಿದ್ದ ಅವರು ರೈಲು ಹಳಿ ವಾಹನದಿಂದ ಇಳಿದು ಹೋಗಿದ್ದರು.
ಆ ಬಳಿಕ ಕಡೂರು ವ್ಯಕ್ತಿ ಗೆ ಕರೆ ಮಾಡಿ ರೈಲಿನ ಸಮಯ ವಿಚಾರಿಸಿದ್ದರು. ಜನ ಶತಾಬ್ದಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದರು.
ಈ ವೇಳೆ ಅವರು ಡೆತ್ ನೋಟ್ ಬರೆದಿದ್ದಾರೆ. ಜೆಡಿಎಸ್ ನಾಯಕ ಹಾಗೂ ಮೇಲ್ಮನೆ ಸದಸ್ಯರೊಬ್ಬರು ಆತ್ಮಹತ್ಯೆ ಹಾದಿ ತುಳಿದಿರುವುದು ರಾಜ್ಯ ರಾಜಕೀಯ ತಲ್ಲಣಗೊಳಿಸಿದೆ.
ನಿನ್ನೆ ತಡರಾತ್ರಿ ಕಡೂರು ತಾಲೂಕಿನ ಗುಣಸಾಗರ ಬಳಿ ರೈಲ್ವೆ ಹಳಿಯಲ್ಲಿ ಅವರ ರುಂಡ ಮುಂಡ ಬೇರ್ಪಟ್ಟ ದೇಹ ಪತ್ತೆಯಾಗಿತ್ತು.
ಅವರು ಪತ್ನಿ ಮಮತಾ, ಮಗ ಸೋನಾಲ್, ಮಗಳು ಸೋನಾಲಿ ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರು ಇತ್ತೀಚೆಗೆ ವಿಧಾನಪರಿಷತ್ನಲ್ಲಿ ಸಭಾಪತಿ ಪೀಠದ ಮೇಲೆ ಕುಳಿತಿದ್ದಾಗ ಅವರನ್ನ ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರಿಂದ ದೊಡ್ಡ ಗಲಾಟೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರಿಂದ ಬಹಳ ನೊಂದುಕೊಂಡಿದ್ದರು.
ಈ ಬಗ್ಗೆ ತಮ್ಮ ಆಪ್ತವಲಯದಲ್ಲಿ ಸಾಕಷ್ಟು ನೋವು ತೋಡಿಕೊಂಡಿದ್ದರು. ಡೆತ್ನೋಟ್ನಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ತಮ್ಮ ಪತ್ನಿ, ಮಗ ಮತ್ತು ಮಗಳ ಕ್ಷಮೆ ಯಾಚಿಸಿದ್ಧಾರೆ.
ಗ್ರಾಮ ಪಂಚಾಯತಿ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಪಡೆದ ಅವರು ಜೆಡಿಎಸ್ ಮೂಲಕ ಒಮ್ಮೆ ಶಾಸಕರಾಗಿ, ಇನ್ನೊಂದು ಬಾರಿ ಮೇಲ್ಮನೆ ಸದಸ್ಯ ರಾಗಿ
ಉಪಸಭಾಪತಿ ಸ್ಥಾನದವರೆಗೆ ಹುದ್ದೆ ಅಲಂಕರಿಸಿದ್ದರು.
ಇದೀಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇಡೀ ಪರಿಷತ್ತು ತಲೆ ತಗ್ಗಿಸುವಂತದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆನಂತರ ಅವರ ಪ್ರಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟು ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.