ಪತ್ರಕರ್ತ, ಪೊಲೀಸ್ ಸೇರಿ ಹಲವರ ಫೇಸ್ಬುಕ್ ಖಾತೆ ಹ್ಯಾಕ್
ಮೊದಲು ಮೆಸೆಂಜರ್ನಲ್ಲಿ ಚಾಟಿಂಗ್ ನಂತರ ಗೂಗಲ್ ಪೇ ಮಾಡಲು ಮೊರೆ..!
ಮಂಜುನಾಥ ಎಸ್. ರಾಠೋಡ
ಗದಗ prajakiran.com : ಹೊಸದಾಗಿ ಸೈಬರ್ ಅಪರಾಧ ಹುಟ್ಟಿಕೊಂಡಿದ್ದು, ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಿ ಹಣದ ಸಹಾಯಕ್ಕಾಗಿ ಮೊರೆಯಿಡಲಾಗುತ್ತದೆ.
ಇದರಲ್ಲಿ ಸಾಮಾನ್ಯರಷ್ಟೇ ಟಾರ್ಗೆಟ್ ಆಗುತ್ತಿಲ್ಲ. ಪತ್ರಕರ್ತರು, ಪೊಲೀಸ್ ಇಲಾಖೆ ಅಧಿಕಾರಿಗಳೇ ಯಾಮಾರಿದ್ದಾರೆ.
ಗದಗನ ಪತ್ರಕರ್ತ ಶಿವಕುಮಾರ ಕುಷ್ಟಗಿ ಹಾಗೂ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರ ಹೆಸರಿನ ಫೇಸ್ಬುಕ್ ಖಾತೆ ಹ್ಯಾಕ್ ಆಗಿವೆ. ಅವರ ಸೇಹಿತರಿಗೆ ಹಣದ ಬೇಡಿಕೆ ಇಟ್ಟಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಫೇಸ್ಬುಕ್ ಮೆಸೆಂಜರ್ನಲ್ಲಿ ಹಾಯ್ ಎಂದು ಒಂದು ಸಂದೇಶ ಕಳುಹಿಸಿ, ಉಭಯಕುಶಲೋಪರಿ ಮಾಡಿ, ಮೆಸೆಂಜರ್ನಲ್ಲಿ ಸಂಭಾಷಣೆ ಒಂದು ಆತ್ಮಿಯ ಘಟ್ಟಕ್ಕೆ ತಲುಪುತ್ತಿದ್ದಂತೆಯೇ ಎದುರಿಗೆ ಇರುವಾತ ತನ್ನ ಬಲೆಗೆ ಬಿದ್ದಿದ್ದಾನೆ ಎಂಬುದು ಮನದಟ್ಟಾದರೆ ವಂಚಕ ಆಟ ಮುಂದುವರಿಸುತ್ತಾನೆ.
ಕಷ್ಟದಲ್ಲಿರುವುದಾಗಿ ಹೇಳಿ, ಗೂಗಲ್ ಪೇ ಮಾಡಿ ಅಂತ ಕೇಳಿಕೊಳ್ಳುತ್ತಾನೆ.
ಒಂದು ವೇಳೆ ಆತನ ಮಾತಿಗೆ ಮರುಳಾಗಿ ನೀವು ಖಾತೆಗೆ ಹಣ ವರ್ಗಾಯಿಸಿದರೆಂದರೆ ಸ್ನೇಹಿತನಿಗೆ ಹಣ ಕೊಟ್ಟಿದ್ದೇನೆ ಎಂದು ನಂಬಿರುವಾತ ವಂಚನೆಗೆ ಒಳಗಾಗಿದ್ದಾನೆ ಎಂದು ಅರ್ಥ.
ಫೇಸ್ ಬುಕ್ ಮೂಲಕ ಈ ರೀತಿ ಮೋಸ ಮಾಡುವ ಜಾಲ ಕಳೆದ ಹಲವು ದಿನಗಳಲ್ಲಿ ಸಾವಿರಾರು ಜನರಿಗೆ ಬಲೆ ಬೀಸಿದ್ದು, ಅದು ಸಕ್ರಿಯವಾಗಿದೆ.
ಯಾವುದೇ ಫೇಸ್ಬುಕ್ ಖಾತೆಗೆ ಮೆಸೆಂಜರ್ನಿಂದ ಸಂದೇಶ ಕಳುಹಿಸಿ ಹಣಕ್ಕಾಗಿ ಬೇಡಿಕೆ ಇಟ್ಟರೆ ಸಾರ್ವಜನಿಕರು ಜಾಗೃತಿ ವಹಿಸಬೇಕು.
ಯಾವುದೇ ಕಾರಣಕ್ಕೂ ಅಪರಿಚಿತರು ಹಾಗೂ ವಂಚಕರು ಕೇಳಿದ ತಕ್ಷಣ ಮೊಬೈಲ್ ಬ್ಯಾಂಕಿಂಗ್ ಮೂಲಕ ಯಾರೂ ಹಣ ವರ್ಗಾವಣೆ ಮಾಡಬಾರದು.
ಸಂದೇಶಕ್ಕೆ ಪ್ರತಿಕ್ರಿಯೆ ನೀಡಿ ಹಣ ವರ್ಗಾಯಿಸಿದರೆ, ವಂಚನೆಗೆ ಒಳಗಾಗಬೇಕಾಗುತ್ತದೆ.
ನಿಜವಾಗಿಯೂ ಸ್ನೇಹಿತನಿಗೆ ಸಹಾಯ ಮಾಡುವ ಮನಸ್ಸು ಇದ್ದರೆ ನೇರವಾಗಿ ಆತನಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಬಹುದು.
ಇಂತಹ ಪ್ರಕರಣ ನಡೆದಾಗ ಸೈಬರ್ ಠಾಣೆಗೆ ದೂರು ಕೊಡುವುದು ಒಳ್ಳೆಯದು ಎಂದು ಗದಗ ಸೈಬರ್ ಠಾಣೆಯ ಇನ್ಸಪೆಕ್ಟರ್ ಟಿ. ಮಹಾಂತೇಶ ತಿಳಿಸಿದರು.