ಧಾರವಾಡ prajakiran.com : ಕೋವಿಡ್ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಲಕ್ಷಣರಹಿತ ಸೋಂಕಿತ ವ್ಯಕ್ತಿಗಳನ್ನು ಕೋವಿಡ್ ಕೇರ್ ಸೆಂಟರುಗಳಿಗೆ ಸ್ಥಳಾಂತರಿಸಲು ಮತ್ತು ಗುಣಮುಖರಾದ ವ್ಯಕ್ತಿಗಳನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಲು ಬಾಡಿಗೆ ವಾಹನಗಳನ್ನು ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಪರ್ಧಾತ್ಮಕವಾಗಿ ಕಡಿಮೆ ದರದಲ್ಲಿ ವಾಹನಗಳನ್ನು ಒದಗಿಸುವ ಟ್ರಾವೆಲ್ ಎಜೆನ್ಸಿಗಳೊಂದಿಗೆ ನಿಯಮಾನುಸಾರ ಕರಾರು ಒಪ್ಪಂದ ಮಾಡಿಕೊಂಡು ಟ್ಯಾಕ್ಸಿಗಳನ್ನು ಬಾಡಿಗೆ ಪಡೆಯಬಹುದು.
ವಾಹನ ಚಾಲಕರಿಗೆ ಸ್ವಯಂ ರಕ್ಷಣಾ ಸಾಮಗ್ರಿಗಳನ್ನು ನೀಡಿ ಸೋಂಕಿತರನ್ನು ಕರೆತರುವ ಮತ್ತು ಮನೆಗೆ ಕಳುಹಿಸುವ ಕುರಿತು ತಿಳುವಳಿಕೆ ನೀಡಬೇಕು ಎಂದರು.
ಪ್ರತಿ ಆ್ಯಂಬುಲೆನ್ಸ್ ಜೊತೆಗೆ ಓರ್ವ ಸರ್ಕಾರದ ಅಧಿಕಾರಿ ಅಥವಾ ಸಿಬ್ಬಂದಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ.ಸಿ. ಸತೀಶ್, ಮಹಾನಗರ ಪಾಲಿಕೆ ಆಯುಕ್ತ ಡಾ: ಸುರೇಶ್ ಇಟ್ನಾಳ ಮತ್ತಿತರರು ಇದ್ದರು.