ಧಾರವಾಡ prajakiran.com : ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ರಾಜ್ಯದ ಬಿಜೆಪಿ ಸರಕಾರದ ಕ್ರಮ ರೈತರ ಮರಣ ಶಾಸನ ಆಗಿದೆ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಅಧ್ಯಕ್ಷ ಎಸ್.ಆರ್. ಹಿರೇಮಠ ಕಿಡಿಕಾರಿದ್ದಾರೆ..
ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಉದ್ದೇಶಿತ ತಿದ್ದುಪಡಿ ನಿಲುವಿನಿಂದ ಹಿಂದೆ ಸರಿಯದಿದ್ದರೆ ಸಮಾನ ಮನಸ್ಕ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ರೈತ ವಿರೋಧಿ ಹಾಗೂ ಪ್ರತಿಗಾಮಿ ಕರ್ನಾಟಕ ಭೂಸುಧಾರಣಾ ಕಾಯ್ದೆ ೧೯೬೧ ಕಲಂ ೭೯ (ಎ), (ಬಿ), (ಸಿ), ೮೦ ನ್ನು ಪೂರ್ವಾನ್ವಯ ಆಗುವಂತೆ ರದ್ದುಪಡಿಸುವುದು ಮತ್ತು ಪ್ರಸ್ತುತ ಬಾಕಿ ಉಳಿದಿರುವ ೭೯ ಎ ಮತ್ತು ೭೯ ಬಿ ಪ್ರಕರಣಗಳನ್ನು ವಜಾ ಮಾಡುವ ಬಗ್ಗೆ ಕಲಂ ೬೩ ರಲ್ಲಿ ನಿಗದಿಪಡಸಿರುವ ಸೀಲಿಂಗ್ ಲಿಮಿಟ್ನ್ನು ದ್ವಿಗುಣಗೊಳಿಸುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದನ್ನು ಸರಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಬಡ ರೈತರ ರಕ್ಷಣೆ ಮತ್ತು ಕೃಷಿ ಸಂಕಟ ವಿಕೋಪಕ್ಕೆ ಹೋಗದಂತೆ ಸರಕಾರ ತನ್ನ ಹೊಣೆಗಾರಿಕೆ ನಿಭಾಯಿಸಬೇಕು. ತಾವು ರೈತ ಪರ ಎಂದು ಹಸಿರು ಶಾಲು ಹಾಕಿಕೊಂಡಿರುವ ಮುಖ್ಯಮಂತ್ರಿಗಳು, ಸಚಿವರಾದ ಆರ್.ಅಶೋಕ ಮತ್ತು ಜೆ.ಸಿ.ಮಾಧುಸ್ವಾಮಿ ಯಂತಹ ಪಟ್ಟಭದ್ರರನ್ನು ನಿಯಂತ್ರಿಸಬೇಕು ಎಂದರು.
ತಮ್ಮ ಜೀವನದ ಇಳಿ ಸಂಜೆಯಲ್ಲಿರುವ ಯಡಿಯೂರಪ್ಪನವರು ರೈತರ ವಿರೋಧಿ ಆಗಲು ಹೋಗಬಾರದು ಎಂದ ಹಿರೇಮಠ, ಒಂದು ವೇಳೆ ಈ ಕಾಯ್ದೆಯ ತಿದ್ದುಪಡಿ ಹಿಂದಿರುವ ರೈತ ವಿರೋಧಿ ಮತ್ತು ಭೂಮಾಫಿಯಾ ವಿರುದ್ಧ ಪಕ್ಷಾತೀತವಾಗಿ ಬೀದಿಗಿಳಿದು ಹೋರಾಟ ನಡೆಸಲಾಗುವುದು.
ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಜನಾಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಹಿರೇಮಠ ಎಚ್ಚರಿಸಿದರು.
ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರಿಸಿದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸಿಟಿಜನ್ ಫಾರ್ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ ಮತ್ತು ಜನಸಂಗ್ರಾಮ ಪರಿಷತ್ ಸ್ವಾಗತಿಸುತ್ತವೆ.
ವಲಸೆ ಕಾರ್ಮಿಕರ ಕುರಿತು ಮುಂಜಾಗ್ರತೆ ಕ್ರಮಗಳನ್ನು ಕೈಕೊಳ್ಳದೇ ಲಾಕ್ಡೌನ್ ಮಾಡಿರುವುದು ಸರಕಾರಗಳ ವೈಫಳ್ಯವಾಗಿದೆ. ಸರಕಾರಗಳ ಮತ್ತು ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಅರಿತು ನ್ಯಾಯಾಲಯ ಕಣ್ಣು ತೆರೆಸಿದಂತಾಗಿದೆ ಎಂದು ಹಿರೇಮಠ ಹೇಳಿದರು.