ಚಿಕ್ಕಬಳ್ಳಾಪುರ prajakiran.com : ತನ್ನ ಹೆಂಡತಿಗೆ ದೈಹಿಕ ಕಿರುಕುಳ ನೀಡುತ್ತಿದ್ದ ಅಣ್ಣನ ವರ್ತನೆಯಿಂದ ಬೇಸತ್ತ ತಮ್ಮ ಮಚ್ಚಿನಿಂದ ಕೊಚ್ಚಿ ಅಣ್ಣನ ಕೊಲೆ ಮಾಡಿದ ಘಟನೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ರಮೇಶ್ ( 34 ) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಮಲಗಿದ್ದ ಅಣ್ಣ ರಮೇಶನನ್ನು ತಮ್ಮ ಸುರೇಶ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಲೆಯಾದ ರಮೇಶಗೆ ಹದಿನೈದು ವರ್ಷಗಳ ಹಿಂದೆಯೇ ಮದುವೆಯಾಗಿದ್ದು ನಾಲ್ಕು ವರ್ಷಗಳಿಂದ ಹೆಂಡತಿ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಾಳೆ. ಹೀಗಾಗಿ ಆತ ತಮ್ಮನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದ ಎಂದು ಹೇಳಲಾಗಿದೆ.
ಇದರಿಂದಾಗಿ ಸಿಟ್ಟಿಗೆದ್ದ ತಮ್ಮ ಸುರೇಶ್ ಮದ್ಯ ಸೇವನೆ ಮಾಡಿ ಮನೆಯ ಪಕ್ಕದಲ್ಲಿ ಮಲಗಿದ್ದ ಅಣ್ಣ ರಮೇಶನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಸಿಪಿಐ ರವಿ ಹಾಗೂ ಪಿಎಸ್ಐ ಅವಿನಾಶ್ ಭೇಟಿ ನೀಡಿ ಪರಿಶೀಲಿಸಿದರು.
ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿತ್ತು ತಮ್ಮನಾದ ಸುರೇಶನ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ಒಳಪಡಿಸಿದ್ದಾಗ ಕೃತ್ಯ ತಾನೇ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಈ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.