ರಾಜ್ಯ

31 ಜಿಲ್ಲೆಗಳ 136 ಶಾಸಕರ, ಮಂತ್ರಿಗಳ ಅಭಿಪ್ರಾಯ ಸಂಗ್ರಹ

*ಅರ್ಥಪೂರ್ಣವಾಗಿ ಯಶಸ್ವಿಯಾದ 5 ದಿನ-50 ಗಂಟೆಗಳ ಸಮನ್ವಯ ಸಭೆ*

*31 ಜಿಲ್ಲೆಗಳ 136 ಶಾಸಕರು ಮತ್ತು ಜಿಲ್ಲಾ ಮಂತ್ರಿಗಳ ಅಭಿಪ್ರಾಯ ಸಂಗ್ರಹ*

*ವಿಧಾನ ಪರಿಷತ್ ಸದಸ್ಯರು, ಸಂಸದರೂ ಸಭೆಯಲ್ಲಿ ಭಾಗಿ*

*31 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಇಲಾಖಾವಾರು ಅಧಿಕಾರಿಗಳು ಪ್ರತಿ ಸಭೆಯಲ್ಲಿ ಭಾಗಿ*

*ಮುಖ್ಯಮಂತ್ರಿಗಳ ಸಚಿವಾಲಯದ 10 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಶಾಸಕರ ಅಹವಾಲು ಮತ್ತು ಬೇಡಿಕೆ ದಾಖಲು*

*ಆಧ್ಯತೆ ಮತ್ತು ಅನುದಾನದ ಲಭ್ಯತೆ ಆಧಾರದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಅಹವಾಲುಗಳ ಜಾರಿಗೆ ಸಿಎಂ ಸೂಚನೆ*

*ಕಾಲ ಮಿತಿಯಲ್ಲಿ ಕೆಲಸ ಆಗಬೇಕು-ಕೆಲಸಗಳು, ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಿಎಂ ಖಡಕ್ ಸೂಚನೆ*

ಬೆಂಗಳೂರು  ಪ್ರಜಾಕಿರಣ.ಕಾಮ್  ಆ 17: ಶಾಸಕರುಗಳ ಅಹವಾಲುಗಳನ್ನು ಆಲಿಸಿ ಬೇಡಿಕೆಗಳಿಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮತ್ತು ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಐದು ದಿನಗಳ ಕಾಲ ನಡೆದ 31 ಜಿಲ್ಲೆಗಳ 136 ಶಾಸಕರುಗಳೊಂದಿಗಿನ ಮುಖ್ಯಮಂತ್ರಿಗಳ ಸಭೆ ಅತ್ಯಂತ ಅರ್ಥಪೂರ್ಣವಾಗಿ ಮುಕ್ತಾಯವಾಗಿದೆ.

ಆಗಸ್ಟ್ ಎರಡನೇ ವಾರದಲ್ಲಿ ಮೂರು ದಿನಗಳು ಮತ್ತು ಮೂರನೇ ವಾರದಲ್ಲಿ ಎರಡು ದಿನಗಳನ್ನು ಈ ಉದ್ದೇಶಕ್ಕಾಗಿಯೇ ಮೀಸಲಿಡಲಾಗಿತ್ತು.

ಐದು ದಿನಗಳ 50 ಗಂಟೆಗಳ ಚರ್ಚೆಯಲ್ಲಿ ಶಾಸಕರುಗಳು ತಮ್ಮ ತಮ್ಮ ಕ್ಷೇತ್ರಗಳಿಗೆ ಆಗಬೇಕಾದ ಅಗತ್ಯ ಕೆಲಸಗಳ ಬೇಡಿಕೆಯನ್ನು ಮತ್ತು ತಮ್ಮ ನಡುವಿನ ಅಸಮಾಧಾನಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು.

ಶಾಸಕರುಗಳ ಮಾತಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರುಗಳ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಕೇಳಿಸಿಕೊಂಡು ಸಕಾರಾತ್ಮಕವಗಿ ಸ್ಪಂದಿಸಿದಿರಿ.

ಅಗತ್ಯ ಅನ್ನಿಸಿದಾಗ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ತಮಂತ್ರಿಗಳು ಶಾಸಕರು ಮತ್ತು ಉಸ್ತುವಾರಿ ಸಚಿವರಿಗೆ ಸೂಚನೆ ಮತ್ತು ಸಲಹೆಗಳನ್ನು ನೀಡಿದರು.

*ಸಭೆಯಲ್ಲಿ ಮುಖ್ಯವಾಗಿ…*

* ಶಾಸಕರು ಮತ್ತು ಜಿಲ್ಲಾ ಮಂತ್ರಿಗಳೊಂದಿಗೆ ಸಮನ್ವಯ.

* ಸರ್ಕಾರ ಮತ್ತು ಪಕ್ಷದ ಜತೆ ಸಮನ್ವಯ.

* ಐದು ಗ್ಯಾರಂಟಿ ಯೋಜನೆಗಳನ್ನು ಮಧ್ಯಮ ಮತ್ತು ಬಡ ವರ್ಗದ ಎಲ್ಲಾ ಜಾತಿ ಸಮುದಾಯಗಳ ಮನೆ ಬಾಗಿಲಿಗೆ ಪರಿಣಾಮಕಾರಿಯಾಗಿ ತಲುಪಿಸುವುದು.

* ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಭರ್ಜರಿ ಗೆಲುವು ದಾಖಲಿಸುವುದು.

* ಲೋಕಸಭಾ ಅಭ್ಯರ್ಥಿಗಳನ್ನು ಹೇಗೆ ನಿರ್ಧರಿಸಬೇಕು.

* ಲೋಕಸಭಾ ಚುನಾವಣೆಯ ಹೊಣೆಯನ್ನು ನಿರ್ವಹಿಸುವುದು, ನಿಭಾಯಿಸುವುದು.

* ಜಿಲ್ಲಾ ಮಟ್ಟದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳು, ಕೆಲಸವನ್ನೇ ಮಾಡದೆ ಬಿಲ್ ಪಡೆದುಕೊಂಡಿರುವ ಪ್ರಕರಣಗಳ ಪಟ್ಟಿ ಮಾಡಿ ತನಿಖೆಗೆ ಒಪ್ಪಿಸುವುದು.

* ಮೆಡಿಕಲ್ ಕಾಲೇಜು, ವಿಮಾನ ನಿಲ್ದಾಣ, ಸರ್ಕಾರಿ ಜಾಗ ಒತ್ತುವರಿ, ಭೂ ಹೀನರ ಸಮಸ್ಯೆಗಳು, ಕಬ್ಬು ಬೆಳೆಗಾರರು-ಸಕ್ಕರೆ ಕಾರ್ಖಾನೆಗಳ, ಶರಾವತಿ ಸಂತ್ರಸ್ಥರು ಸೇರಿದಂತೆ ಇತರೆ ಸಮಸ್ಯೆಗಳು.

* ಕಾನೂನು ಸುವ್ಯವಸ್ಥೆ, ಸುಳ್ಳು ಸುದ್ದಿ ಹರಡುವುದು, ನಕಲಿ ಪತ್ರಗಳ ಸೃಷ್ಟಿ, ಖಾಲಿ ಪೆನ್ ಡ್ರೈವ್ ಡ್ರಾಮಾಗಳು ಸೇರಿ ಇತ್ಯಾದಿ ಷಡ್ಯಂತ್ರಗಳನ್ನು ರಾಜಕೀಯವಾಗಿ, ಒಗ್ಗಟ್ಟಾಗಿ ಎದುರಿಸುವುದು.

* ಪ್ರತಿ ಸಚಿವರೂ ತಮ್ಮ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗಳಿಗೆ ಕಡ್ಡಾಯ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆ , ಕುಂದು ಕೊರತೆ ಆಲಿಸಬೇಕು.

* ಹಿಂದಿನ ಸರ್ಕಾರದ ಅವಧಿಯಲ್ಲಿ ದ್ವೇಷ ರಾಜಕಾರಣದ ಭಾಗವಾಗಿ ವರ್ತಿಸಿದ ಮತ್ತು ವೃತ್ತಿಪರವಾಗಿ ನಡೆದುಕೊಳ್ಳದ ಅಧಿಕಾರಿಗಳು ಈಗಲೂ ತಮ್ಮ ಪ್ರಭಾವ ಬಳಸಿ ಆಯಕಟ್ಟಿನ ಜಾಗಗಳಲ್ಲಿ ಇದ್ದಾರೆ.

ಇವರಿಗೆ ವೃತ್ತಿಪರವಾಗಿ ಕಾರ್ಯನಿರ್ವಹಿಸುವಂತೆ ಸ್ಪಷ್ಟ ಎಚ್ಚರಿಕೆ ನೀಡುವುದೂ ಸೇರಿದಂತೆ ಸಮಗ್ರವಾಗಿ ಚರ್ಚೆಗಳು ನಡೆದವು.

ಪ್ರತಿ ಶಾಸಕರ ಅಭಿಪ್ರಾಯ ಮತ್ತು ಅಭಿವೃದ್ಧಿಯ ಬೇಡಿಕೆಗಳನ್ನು ದಾಖಲಿಸಿಕೊಳ್ಳಲು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ರಚಿಸಲಾಗಿತ್ತು.

ಈ ತಂಡ ಜಿಲ್ಲಾವಾರು ಪ್ರತ್ಯೇಕ ಬೇಡಿಕೆಗಳು ಮತ್ತು ಪ್ರಗತಿಯ ಪಟ್ಟಿಗಳನ್ನು ಸಿದ್ದಪಡಿಸಿ ಸಂಬಂಧಪಟ್ಟ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ನೀಡಲಿದೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಬಿಎಂಪಿ ಮತ್ತು ಮೈಸೂರು ಪಾಲಿಕೆ ಚುನಾವಣೆಗಳಲ್ಲಿ ಜಯಭೇರಿ ಬಾರಿಸುವುದು ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಗಳಿಸುವ ಕುರಿತಂತೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಮನ್ವಯದಿಂದ ಕೆಲಸ ಮಾಡುವ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ತಮ್ಮ ತಮ್ಮ ಕ್ಷೇತ್ರಗಳನ್ನು ಹೊರತುಪಡಿಸಿ ತಮ್ಮದಲ್ಲದ ಕ್ಷೇತ್ರಗಳ ಆಡಳಿತಾತ್ಮಕ ವಿಚಾರಗಳಲ್ಲಿ ಯಾರೂ ಮೂಗು ತೂರಿಸಬಾರದು. ಜಿಲ್ಲಾ ಮಂತ್ರಿಗಳು ಶಾಸಕರಿಗೆ ಲಭ್ಯ ಇರಬೇಕು ಎನ್ನುವ ಸೂಚನೆಗಳನ್ನು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯ ಮಂತ್ರಿಗಳು ಪ್ರತಿ ಸಭೆಯಲ್ಲೂ ಸ್ಪಷ್ಟವಾಗಿ ನೀಡಿದರು.

*ಸಭೆಯ ಫಲಶೃತಿ*

* ಎಲ್ಲಾ ಶಾಸಕರೂ ಬಹಳ ಸಮಾಧಾನ, ಸಂಭ್ರಮ ವ್ಯಕ್ತಪಡಿಸಿದರು.

* ಸಮನ್ವಯ ಸಾಧಿಸಲು ಮತ್ತು ಅಗತ್ಯ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲು ನೆರವಾಗಿದ್ದಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಧನ್ಯತೆ ಅರ್ಪಿಸಿದರು.

* ಯಾವುದೇ ಭಿನ್ನಾಭಿಪ್ರಾಯಗಳಿಗೆ ಆಸ್ಪದ ಇಲ್ಲದಂತೆ ತಮ್ಮೆಲ್ಲರ ಮಾತುಗಳನ್ನೂ ಕೇಳಿಸಿಕೊಂಡಿದ್ದು, ಬಳಿಕ ಸ್ಪಂದಿಸಿದ್ದು ಅತ್ಯಂತ ಆರೋಗ್ಯಪೂರ್ಣವಾಗಿತ್ತು ಎನ್ನುವ ಅಭಿಪ್ರಾಯಗಳನ್ನು ಪ್ರತಿ ಸಭೆಯ ಕೊನೆಯಲ್ಲಿ ಶಾಸಕರು ಮುಕ್ತವಾಗಿ ವ್ಯಕ್ತಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *