ಬೆಂಗಳೂರು prajakiran.com : ರಾಜ್ಯದ ಪಾಲಿಗೆ ಶುಕ್ರವಾರ ಕರಾಳವಾಗಿದ್ದು, ಬೆಳಗ್ಗೆ 178 ಸೋಂಕು ದೃಢಪಟ್ಟಿದ್ದರೆ ಸಂಜೆ ಮತ್ತೇ 70 ಪ್ರಕರಣ ವಕ್ಕರಿಸುವ ಮೂಲಕ ಒಂದೇ ದಿನ 248 ಸೋಂಕು ಖಚಿತಗೊಂಡಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಅತಿ ಹೆಚ್ಚು ಸೋಂಕಿತರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪತ್ತೆಯಾಗಿದ್ದು, ಬಿಸಲನಾಡು ರಾಯಚೂರಿನಲ್ಲಿ 62, ಕಲಬುರಗಿಯಲ್ಲಿ 61,ಯಾದಗಿರಿಯಲ್ಲಿ 60 ಪ್ರಕರಣಗಳು ಈ ಮೂರು ಜಿಲ್ಲೆಗಳಲ್ಲಿಯೇ ಕಂಡು ಬಂದಿವೆ.
ಇನ್ನೂಳಿದಂತೆ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ 12 ಪ್ರಕರಣಗಳು ಕಂಡು ಬಂದಿವೆ.
ಅದೇ ರೀತಿ ಕೃಷ್ಣನ ನಾಡು ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಮತ್ತೇ 12, ಬಳ್ಳಾರಿ 9, ಹಾಸನ 4, ದಾವಣಗೆರೆ 4, ತುಮಕೂರು 2, ಚಿಕ್ಕಮಗಳೂರು 2, ಮೈಸೂರು 2, ಮಂಡ್ಯ 2 ಹಾಗೂ ಧಾರವಾಡ , ಶಿವಮೊಗ್ಗ, ಚಿತ್ರದುರ್ಗ , ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ಕಂಡು ಬಂದಿವೆ.
ಬೆಂಗಳೂರಿನ 12 ಜನರ ಪೈಕಿ ಆರು ಜನರು ಕಮಾಂಡೋ ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ. ಆ ಮೂಲಕ ರಾಜ್ಯದ ಇವತ್ತಿನ ಒಟ್ಟು ಸೋಂಕಿತರ ಸಂಖ್ಯೆ 248 ಆಗಿದ್ದು, ಈವರೆಗೆ 2781 ಜನರಿಗೆ ತಗುಲಿದಂತಾಗಿದೆ.
ಈ ಪೈಕಿ ಇಂದೇ ರಾಜ್ಯದ ವಿವಿಧ ಆಸ್ಪತ್ರೆಗಳಿಂದ 60 ಜನ ಗುಣಮುಖರಾಗಿದ್ದು, ಒಟ್ಟು 894 ಜನ ಬಿಡುಗಡೆಯಾಗಿದ್ದಾರೆ. 1837 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವತ್ತಿನ ಬಹುತೇಕ ಪ್ರಕರಣಗಳು ಮಹಾರಾಷ್ಟ್ರ ಸೇರಿ ಅಂತರ್ ಜಿಲ್ಲೆ, ಅಂತರ್ ರಾಜ್ಯ ಹಾಗೂ ಅಂತರ್ ರಾಷ್ಟ್ರೀಯ ಪ್ರಯಾಣದ ನಂಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.
ಮೇ 24ರಂದು ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಕರೋನಾ ತಪಾಸಣೆಗೆ ಒಳಪಡಿಸಿದಾಗ ಅವರಿಗೆ ಸೊಂಕು ಕಾಣಿಸಿಕೊಂಡಿತ್ತು.
ಅವರನ್ನು ಪಿ 2762 ಸೋಂಕಿತ 50 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಅವರು ಚಿಕ್ಕಬಳ್ಳಾಪುರದ ಮೂಲದವರು ಎಂದು ತಿಳಿದು ಬಂದಿದೆ.
ಬೈಕ್ ಅಪಘಾತದಲ್ಲಿ ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಆದರೆ ಚಿಕಿತ್ಸೆಫಲಿಸದೆ, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಈ ಮಹಿಳೆ ಶುಕ್ರವಾರ ಸಂಜೆ ಸಾವನ್ನಪ್ಪಿದ್ದಾರೆ. ಆ ಮೂಲಕ ಕರೋನಾ ರಣಕೇಕೆ ಮುಂದುವರೆದಿದ್ದು, ಸಾವಿನ ಸಂಖ್ಯೆ 48ಕ್ಕೆ ಏರಿದೆ.