ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶ ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಅವರ ಪರ ವಕೀಲರು ವಾಪಾಸ್ ಪಡೆದಿದ್ದಾರೆ.
ಗುರುವಾರ ಧಾರವಾಡದ ಮೂರನೇ ಹೆಚ್ಚುವರಿ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರಾದ ವಿನಯ ಕುಲಕರ್ಣಿ ಪರ ವಕೀಲ ಎಂ.ಎ ಪಠಾಣ ಜಾಮೀನು ಅರ್ಜಿಯನ್ನು ವಾಪಸ್ ಪಡೆಯುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
ಧಾರವಾಡದ ಮೂರನೇ ಹೆಚ್ಚುವರಿ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆಯರಾದ ಶ್ರೀಮತಿ ಎಂ. ಪಂಚಾಕ್ಷರಿ ಅವರು
ಇದಕ್ಕೆ ಸಮ್ಮತಿ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ತಕರಾರು ಅರ್ಜಿ ಸಲ್ಲಿಸಲು ಬಂದಿದ್ದ ಸಿಬಿಐ ವಕೀಲರು,
ಜಾಮೀನು ಅರ್ಜಿ ಹಿಂಪಡೆದ ಹಿನ್ನೆಲೆ
ತಕರಾರು ಸಲ್ಲಿಸದೇ ಮರಳಿದರು.
ತೀವ್ರ ಕುತೂಹಲ ಕೆರಳಿಸಿದ್ದ ಜಾಮೀನು ಅರ್ಜಿಯ ವಿಚಾರಣೆಗೆ ಮುನ್ನವೇ ಅವರ ಪರ ವಕೀಲರು
ಹಿಂಪಡೆದಿರುವುದು ಅವರ ಕುಟುಂಬ ಸದಸ್ಯರ ಕೋರಿಕೆ ಮೇರೆಗೆ ಎಂದು ವಕೀಲರು ತಿಳಿಸಿದರು.
ಅಲ್ಲದೆ, ಮತ್ತೆ ಬೇರೆ ವಕೀಲರ ಮೂಲಕ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಈ ಹಿಂದೆ ಬೆಂಗಳೂರಿನ ವಕೀಲರಾದ ಭರತಕುಮಾರ ಎಂ ಅವರು ವಿನಯ ಕುಲಕರ್ಣಿ ಪರ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.
ಇದೀಗ ಮತ್ತೆ ಬಾಹುಬಲಿ ಧನವಡೆ ಅವರ ಮೂಲಕ ಜಾಮೀನು ಅರ್ಜಿ ಸಲ್ಲಿಸಲು ಸಿದ್ದತೆ ನಡೆದಿದೆ ಎಂದು ಹೇಳಲಾಗುತ್ತಿದೆ.