ಬೆಂಗಳೂರು prajakiran.com : ಕಳೆದ ಒಂದೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನವಲೂರು ಬಿಆರ್ಟಿಎಸ್ ರೋಡ್ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸಲು ಗ್ರಾಮಸ್ಥರು ಆಗ್ರಹಿಸಿದರು.
ಬೆಂಗಳೂರು ನಗರದ ಖನಿಜ ಭವನದ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕೆಆರ್ಡಿಎಸಿಎಲ್, ಹೆಚ್ ಡಿ ಬಿ ಆರ್ ಟಿ ಎಸ್ ಹಾಗೂ ನವಲೂರಿನ ಗ್ರಾಮಸ್ಥರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ಅಹವಾಲು ಆಲಿಸಿದರು.
ಇದಕ್ಕಾಗಿಯೇ ಹೊಸ ಸಂಸ್ಥೆಯ ಸಮಾಲೋಚಕರನ್ನು ಬಳಸಿಕೊಳ್ಳಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಶೆಟ್ಟರ್ ಅಧಿಕಾರಿಳಿಗೆ ಸೂಚನೆ ನೀಡಿದರು.
ನವಲೂರಿನ ಬಳಿ ರೋಡ್ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಅಲ್ಲಿನ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಪೂರ್ಣಗೊಳಿಸುವ ಅವಶ್ಯಕತೆ ಇದೆ.
ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತಾಂತ್ರಿಕ ಸಮಿತಿಯ ಸಲಹೆ ಜೊತೆಯಲ್ಲಿಯೇ ಮೂರನೇ ಸಂಸ್ಥೆಯ ಸಹಾಯವನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದರು.
ಇದೇ ವೇಳೆ ನಗರ ಭೂಸಾರಿಗೆ ನಿರ್ದೇಶನಾಲಯದ ಹಿರಿಯ ಅಧಿಕಾರಿಯಾದ ಮಂಜುಳಾ ಅವರು ನೀಡಿದ ನಾಲ್ಕು ಆಯ್ಕೆಗಳನ್ನು ಪರಾಮರ್ಶಿಸಿದರು. ಅಲ್ಲದೆ, ಈ ಆಯ್ಕೆಗಳಿಗೆ ಗ್ರಾಮಸ್ಥರು ಮುಂದಿಟ್ಟ ಸಮಸ್ಯೆಗಳನ್ನು ಆಲಿಸಿದರು.
ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ, ಕೆಆರ್ಡಿಸಿಎಲ್ ಎಂಡಿ ಪ್ರಕಾಶ್ ಕುಮಾರ್, ತಾಂತ್ರಿಕ ನಿರ್ದೇಶಕ ಜಯಪ್ರಕಾಶ್ ಸೇರಿದಂತೆ ನವಲೂರಿನ ಗ್ರಾಮಸ್ಥರೂ ಪಾಲ್ಗೊಂಡಿದ್ದರು.