ಧಾರವಾಡ prajakiran.com : ಧಾರವಾಡ, ಗದಗ,ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಶುಕ್ರವಾರ ಜರುಗಿತು.
19 ಅಭ್ಯರ್ಥಿಗಳಿಂದ ಸಲ್ಲಿಸಲ್ಪಟ್ಟಿದ್ದ 32 ನಾಮಪತ್ರಗಳಲ್ಲಿ 8 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ವೀಕ್ಷಕರಾಗಿರುವ ಕರ್ನಾಟಕ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ , ಚುನಾವಣಾಧಿಕಾರಿಗಳಾಗಿರುವ ಪ್ರಾದೇಶಿಕ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ,ಸಹಾಯಕ ಚುನಾವಣಾಧಿಕಾರಿಯಾಗಿರುವ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ನಾಮಪತ್ರ ಪರಿಶೀಲನೆ ಕಾರ್ಯ ಕೈಗೊಂಡರು.
ತಿರಸ್ಕೃತಗೊಂಡ ನಾಮಪತ್ರಗಳು :
ಆಜಾದ್ ಮಜದೂರ್ ಕಿಸಾನ್ ಪಕ್ಷದ ಪ್ರಕಾಶ ಕಾಂಬಳೆ,ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮಂಜುನಾಥ ಭದ್ರಪ್ಪ ಬೆಳವತ್ತಿ,
ಜನತಾದಳ ( ಸಂಯುಕ್ತ) ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ, ಪಕ್ಷೇತರರಾದ ,ಅಶೋಕ ಮಲ್ಲಪ್ಪ ಜವಳಿ, ಕೃಷ್ಣ ಹನುಮಂತಪ್ಪ ಬಳಿಗಾರ,ಚನ್ನಪ್ಪ ಪಿ.ಬ್ರಹ್ಮನಪಾಡ, ಚರಣರಾಜ್ ಕೆ.ಎ., ರವಿ ಶಿವಪ್ಪ ಪಡಸಲಗಿ ಅವರು ಸಲ್ಲಿಸಿದ್ದ ನಾಮಪತ್ರಗಳಲ್ಲಿ ನೈಜ ಸೂಚಕರು, ಅಫಿಡವಿಟ್ ಗಳಲ್ಲಿ ನ್ಯೂನ್ಯತೆ, ಮತದಾರರ ಪಟ್ಟಿಯ ಪ್ರಮಾಣೀಕೃತ ಪ್ರತಿಗಳ ಕೊರತೆ ಮತ್ತಿತರ ಅಂಶಗಳು ಕಂಡು ಬಂದ ಹಿನ್ನೆಲೆಯಲ್ಲಿ ಈ ಎಂಟು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡವು.