ಧಾರವಾಡ prajakiran.com : ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ 148 ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ.
20 ಅಡುಗೆ ತಯಾರಕರರು,
128 ಅಡುಗೆ ಸಹಾಯಕರಿಗೆ ಕಳೆದ ಡಿಸೆಂಬರ್ ತಿಂಗಳಿಂದ ಸಂಬಳ ಮಾಡದಿರುವುದರಿಂದ ಅವರ ಜೀವನ ಸಾಗಿಸುವುದು ಹಾಗೂ ಕುಟುಂಬದ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂದು ಧಾರವಾಡದ ಸಾಮಾಜಿಕ ಕಾರ್ಯಕರ್ತ ಸುರೇಶ, ಕೆ. ಆರೋಪಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ನಡೆದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
ಅನೇಕರು ಅಲ್ಲಿ ಇಲ್ಲಿ ತಮ್ಮ ನೆರೆಹೊರೆಯವರ ಬಳಿ ಸಾಲಸೂಲ ಮಾಡಿ ಜೀವನ ಸಾಗಿಸುತ್ತಿದ್ದು, ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಆಗಿದೆ.
ಆದರೂ ಸಮಾಜ ಕಲ್ಯಾಣ ಇಲಾಖೆಗೆ ಹೊರ ಗುತ್ತಿಗೆ ಮೂಲಕ ಕೆಲಸಗಾರರ ಪೂರೈಕೆ ಮಾಡಿರುವ ಭಾರತ ಸೆಕ್ಯುರಿಟಿ ಎಕ್ಸ್ ಸರ್ವಿಸ್ ಮೆನ್ ಏಜೆನ್ಸಿಗೆ ಸಮಾಜ ಕಲ್ಯಾಣ ಇಲಾಖೆ ಹಲವು ಬಾರಿ ನೋಟಿಸ್ ಕೊಟ್ಟರೂ ಕ್ಯಾರೆ ಎನ್ನದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ದೂರಿದರು.
ಸಂಬಳವಿಲ್ಲದೆ ಕೆಲಸ ನಿರ್ವಹಿಸಿದರೂ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಎಂ.ಬಿ. ಸಣ್ಣೇರಿ ಪ್ರತಿಭಟನೆ ನಡೆಸಿದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿದ್ದಾರೆ.
ಇದು ಸರಿಯಾದ ಬೆಳವಣಿಗೆ ಅಲ್ಲ. ಒಂದು ವೇಳೆ ಅಧಿಕಾರಿಗಳು ದೌರ್ಜನ್ಯ ಮುಂದುವರೆಸಿದರೆ ಅವರ ವಿರುದ್ದವೇ ಹೋರಾಟ ನಡೆಸಬೇಕಾಗುತ್ತದೆ ಎಂದು ಸುರೇಶ ತರಾಟೆಗೆ ತೆಗೆದುಕೊಂಡರು.
ಸಂಬಳ ಮಾಡದಿರುವ ಏಜೆನ್ಸಿಗೆ ಅಧಿಕಾರಿಗಳು ನೋಟೀಸ್ ನೀಡಿದರೂ ಕೂಡ ಗಂಭೀರವಾಗಿ ಪರಿಗಣಿಸದ ಭಾರತ ಸಕ್ಯೂರಿಟ್ ಎಕ್ಸ್ ಸರ್ವಿಸ್ ಮೆನ್ ಏಜೆನ್ಸಿ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ, ದಿನಗೂಲಿ ನೌಕರರ ಸಂಬಳ ಶೀಘ್ರವಾಗಿ ನೀಡಬೇಕು.
ಜೊತೆಗೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಪಿ. ಮಣಿವಣ್ಣನ್ ಅವರು ಹುಬ್ಬಳ್ಳಿಯಲ್ಲಿದ್ದಾಗ ಗಮನಕ್ಕೆ ತರಲಾಗಿದೆ. ಆದರೂ ಈವರೆಗೆ ಸಂಬಳ ದೊರೆತಿಲ್ಲ.
ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸದ ಪರಿಣಾಮ ಇಂದು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಈಗಲಾದರೂ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸಂಬಳ ಬಿಡುಗಡೆ ಮಾಡಿ ದಿನಗೂಲಿ ನೌಕರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸುರೇಶ್ ಕೆ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಬಸವರಾಜ ಕೊದ್ದಡ್ಡಿ, ವಿಜಯ ಜಾಧವ್, ಅನಿಲ ಪವಾರ್, ಶಿವರಾಜ ಮೋತಿ, ವೇಣು ಜಿರಾಕ್ಸ್ ಧಾರವಾಡ, ರಮೇಶ ದಡೆಸೂರ ಸೇರಿದಂತೆ ಹಲವಾರು ದಿನಗೂಲಿ ನೌಕರರ ಮುಖಂಡರು ಉಪಸ್ಥಿತರಿದ್ದರು.