ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಸಾರಥ್ಯ
ಅಡುಗೆ ಸಹಾಯಕರ ಮೂರು ತಿಂಗಳ ಸಂಬಳ ನೀಡದ ಕುರಿತು ಆಕ್ರೋಶ
ಧಾರವಾಡ prajakiran.com : ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 150 ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಹಾಯಕರಿಗೆ ಮೂರು ತಿಂಗಳ ಸಂಬಳ ನೀಡದಿರುವುದರ ಕುರಿತು ನೂರಾರು ನೌಕರರು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಸಾರಥ್ಯದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಬಳ ಸಕಾಲಕ್ಕೆ ದೊರೆಯದೆ ಜೀವನ ನಡೆಸುವುದು ಕಷ್ಟಕರವಾಗಿದೆ.
ಈ ವೇಳೆ ಮಾತನಾಡಿದ ಬಸವರಾಜ ಕೊರವರ, ಸಮಾಜ ಕಲ್ಯಾಣ ಇಲಾಖೆ ಭ್ರಷ್ಟಾಚಾರದ ಕೂಪವಾಗಿದೆ. ಹೊರಗುತ್ತಿಗೆ ಹೆಸರಿನಲ್ಲಿ ಅಧಿಕಾರಿ ವರ್ಗದವರು ಹಾಗೂ ರಾಜಕಾರಣಿಗಳು ಬೆಳೆ ಬೆಯಿಸಿಕೊಳ್ಳುತ್ತಿದ್ದಾರೆ.
ಈ ಕುರಿತು ವಿಚಾರಿಸಿದರೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ಹಲವು ಹಾಸ್ಟೆಲ್ ವಾರ್ಡನ್ ಗಳು ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ಇದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿ ಕಾರಿದರು.
ಈ ಹಿಂದೆ ಕೂಡ ಹಲವು ಬಾರಿ ಪ್ರತಿಭಟನೆ ನಡೆಸಿದಾಗ ಕೇವಲ ನಾಮಕಾವಾಸ್ತೆ ಎಂಬಂತೆ ಒಂದು ತಿಂಗಳ ಸಂಬಳ ನೀಡಿ ಅಧಿಕಾರಿಗಳು
ಕೈ ತೊಳೆದುಕೊಂಡಿದ್ದಾರೆ ಎಂದು ದೂರಿದರು.
ಕಳೆದ ಹಲವು ವರ್ಷದಿಂದ
ಪ್ರತಿ ತಿಂಗಳು ಸಂಬಳ ನೀಡದೆ ಅನ್ಯಾಯ ಎಸಗುತ್ತಿದ್ದರೂ ಅಡುಗೆ ಸಹಾಯಕರ ಹೊರಗುತ್ತಿಗೆ ಪಡೆದಿರುವ
ಭಾರತ್ ಎಕ್ಸಸರ್ವಿಸ್ ಮ್ಯಾನ್ ಏಜೆನ್ಸಿ ವಿರುದ್ಧ ಸೂಕ್ತವಾದ ಕ್ರಮ ಕೈಗೊಂಡು ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕಾದ ಅಧಿಕಾರಿ ವರ್ಗದವರು ಇದಕ್ಕೆ ತಮಗೆ ಸಂಬಂಧವಿಲ್ಲದಂತೆ ವರ್ತಿಸುವ ಮೂಲಕ ಬೇಜವಾಬ್ದಾರಿ ವರ್ತನೆ ತೋರಿಸಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಶ್ರೀನಿವಾಸ ಕೋಟಾ ಪೂಜಾರಿ ಹಾಗೂ ಆಯುಕ್ತರಾದ ಪಿ. ಮಣಿವಣ್ಣನ್ ಅವರಿಗೆ ಕೂಡ ದೂರು ನೀಡಲಾಗಿದೆ.
ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಯಾರೊಬ್ಬರೂ ಇಚ್ಛಾಶಕ್ತಿ ತೋರದ ಪರಿಣಾಮ ಇಂದು ಮತ್ತೆ ನಾವು ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಈಗಲಾದರೂ ಸಕಾರಾತ್ಮಕವಾಗಿ ಸ್ಪಂದಿಸಿ ನಮಗೆ ಮೂರು ತಿಂಗಳ ಸಂಬಳ ಬಿಡುಗಡೆ ಗೊಳಿಸಿ, ಭಾರತ್ ಎಕ್ಸ್ ಸರ್ವಿಸ ಮ್ಯಾನ್ ಎಜೆನ್ಸಿ ಹಾಗೂ ತಪ್ಪಿತಸ್ಥ ಅಧಿಕಾರಿ ವರ್ಗದವರ ವಿರುದ್ದ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು
ಇಲ್ಲದಿದ್ದರೆ ಬರುವ ದಿನಗಳಲ್ಲಿ ಅಡುಗೆ ಮಾಡಿ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳಬೇಡಿ ಎಂದು ಜನಜಾಗೃತಿ ಸಂಘ ದ ಅಧ್ಯಕ್ಷ ಬಸವರಾಜ ಕೊರವರ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜನಜಾಗೃತಿ ಸಂಘ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ
ರಾಘವೇಂದ್ರ ಶೆಟ್ಟಿ, ಮುಖಂಡರಾದ
ಸುರೇಶ ಕೋರಿ,
ಮಹಾದೇವ ದೊಡಮನಿ,
ಎಸ್.ಬಿ. ಪೂಜಾರ,
ವಿಜಯ ಜಾಧವ್, ರಘು ಸಿ,
ಲಾಲ್ ಸಾಬ್, ಶಿವರಾಜ ಮೋತಿ, ಮಹಾದೇವ,
ಅಕ್ಕಮ್ಮ, ಲಕ್ಷ್ಮಿ, ಹುಲಗಮ್ಮ, ಸೇರಿದಂತೆ ನೂರಾರು ಅಡುಗೆ ಸಹಾಯಕರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.