ಅಂತಾರಾಷ್ಟ್ರೀಯ

ರಾಮಮಂದಿರ ನಿರ್ಮಾಣಕ್ಕೆ 4 ಲಕ್ಷ ಹಳ್ಳಿ, 11 ಕೋಟಿ ಕುಟುಂಬ ತಲುಪಲು ವಿಶ್ವ ಹಿಂದೂ ಪರಿಷತ್ ನಿಂದ ಅಭಿಯಾನ

ನವದೆಹಲಿ prajakiran.com :
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಯೋಜನೆಯ ಅನ್ವಯ ಸಮಸ್ತ ಹಿಂದೂ ಸಮಾಜದಿಂದ ರಾಮ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆಗೆ, ತನ್ನ ಸಂಪೂರ್ಣ ಸಹಯೋಗ ನೀಡುವುದಾಗಿ ವಿಶ್ವ ಹಿಂದೂ ಪರಿಷದ್ (ವಿಹಿಂಪ) ನಿರ್ಧರಿಸಿದೆ ಎಂದು ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ವಿಹಿಂಪ ಕಾರ್ಯಕರ್ತರು, ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕೆ ಹಾಗೂ ಅಲ್ಲಿನ ಇತರೆ ಸೌಲಭ್ಯಗಳಿಗೆ ಅನುವಾಗುವಂತೆ 4 ಲಕ್ಷ ಹಳ್ಳಿಗಳನ್ನು, 11 ಕೋಟಿ ಕುಟುಂಬಗಳನ್ನು ತಲುಪಲಿದ್ದಾರೆ ಎಂದರು.

ಕರ್ನಾಟಕ ರಾಜ್ಯದಲ್ಲಿ 27,500 ಹಳ್ಳಿಗಳನ್ನು, ಸುಮಾರು 90 ಲಕ್ಷ ರಾಮಭಕ್ತರನ್ನು ತಲುಪುವ, ಹಾಗೂ ರಾಮಮಂದಿರಕ್ಕೆ ಧನ ಸಂಗ್ರಹಿಸುವ ಯೋಜನೆಯನ್ನು ವಿಹಿಂಪ ಹಾಕಿಕೊಂಡಿದೆ.

ಉಡುಪಿಯ ಪೇಜಾವರ ಮಠದ ಪೂಜ್ಯ ಸ್ವಾಮೀಜಿಯವರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನ ವಿಶ್ವಸ್ತರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.

ರೂ 10/-, ರೂ100/-, ರೂ 1000/- ದ ಮುದ್ರಿತ ಕೂಪನ್ ಗಳ ಸಹಾಯದಿಂದ ಧನಸಂಗ್ರಹ ನಡೆಯಲಿದೆ.

ಇನ್ನು ರೂ. 2000/- ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುವುದು ಹಾಗೂ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯತಿಯ ಸೌಲಭ್ಯ ಪಡೆಯಬಹುದಾಗಿದೆ ಎಂದರು.

5 ಕಾರ್ಯಕರ್ತರನ್ನು ಒಳಗೊಂಡ ತಂಡ ಈ ನಿಧಿ ಸಮರ್ಪಣಾ ಅಭಿಯಾನದಲ್ಲಿರುತ್ತದೆ. ಸಂಗ್ರಹವಾದ ಅಷ್ಟೂ ಹಣವನ್ನು 48 ಗಂಟೆಗಳೊಳಗೆ ತೀರ್ಥಕ್ಷೇತ್ರ ಟ್ರಸ್ಟ್ ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ತನ್ನ ತಂಡದಲ್ಲಿ ಸಂಗ್ರಹವಾದ ಹಣವನ್ನು ಜಮೆ ಮಾಡುವ ಪ್ರತಿ ಕಾರ್ಯಕರ್ತರಿಗೆ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಬ್ಯಾಂಕ್ ಆಫ್ ಬರೋಡಾ ಅಥವಾ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನೋಂದಣಿ ಸಂಖ್ಯೆ ನೀಡಲಾಗಿರುತ್ತದೆ. ಹಣ ಸಂಗ್ರಹಣೆ, ಖಾತೆಗೆ ಪಾವತಿಸುವಲ್ಲಿ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿರುತ್ತದೆ. 

ಲಾರ್ಸನ್ ಅಂಡ್ ಟುಬ್ರೋ ಸಂಸ್ಥೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮಂದಿರ ನಿರ್ಮಾಣ ಕಾರ್ಯಕ್ಕೆ ತನ್ನ ಅಭಿಯಂತರರನ್ನು ನಿಯೋಜಿಸಲಿದೆ. ಐಐಟಿ ಮುಂಬೈ, ಐಐಟಿ ದೆಹಲಿ, ಐಐಟಿ ಚೆನ್ನೈ , ಐಐಟಿ ಗುವಹಾಟಿ, ಸಿ ಬಿ ಆರ್ ಐ ರೂರ್ಕಿ ಹಾಗೂ ಲಾರ್ಸನ್ ಅಂಡ್ ಟುಬ್ರೋ ಸಂಸ್ಥೆ ಮಂದಿರದ ಅಡಿಪಾಯದ ನೀಲನಕ್ಷೆಯ ಕೆಲಸದಲ್ಲಿ ಈಗಾಗಲೇ ತೊಡಗಿದ್ದಾರೆ ಎಂದು ವಿವರಿಸಿದರು.

ಸಂಪೂರ್ಣ ಮಂದಿರ ಕಲ್ಲಿನ ಬ್ಲಾಕ್ ಗಳ ಸಹಾಯದಿಂದ ನಿರ್ಮಿತವಾಗಲಿದೆ. ಮಂದಿರದ ವಿಸ್ತೀರ್ಣ 2.7 ಎಕರೆ. 54,000 ಚದರ ಅಡಿಯ ಜಾಗದಲ್ಲಿ ಮಂದಿರ ನಿರ್ಮಾಣಗೊಳ್ಳಲಿದೆ.

360 ಅಡಿ ಉದ್ದ ಹಾಗೂ 235 ಅಡಿ ಅಗಲದ ಮಂದಿರದಲ್ಲಿ ಮೂರು ಅಂತಸ್ತು ಹಾಗೂ 5 ಮಂಟಪಗಳಿರುತ್ತವೆ. ನೆಲಮಾಳಿಗೆಯಲ್ಲಿ 160 ಕಂಬಗಳು, ಮೊದಲನೆಯ ಮಹಡಿಯಲ್ಲಿ 132 ಕಂಬಗಳು, ಎರಡನೆಯ ಮಹಡಿಯಲ್ಲಿ 74 ಕಂಬಗಳಿರುತ್ತವೆ ಎಂದರು.

2024ರ ಒಳಗಾಗಿ ಶ್ರೀರಾಮ ಲಲ್ಲಾನನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವುದು ಹಾಗೂ ಭಕ್ತರಿಗೆ ದರ್ಶನ ವ್ಯವಸ್ಥೆ ಸಾಧ್ಯವಾಗಬಹುದಾಗಿದೆ ಎಂದು ಅಂದಾಜಿಸಲಾಗಿದೆ.

ಮಂದಿರ ನಿರ್ಮಾಣದ ಜೊತೆಗೆ ಅಂತಾರಾಷ್ಟ್ರೀಯ ದರ್ಜೆಯ ಗ್ರಂಥಾಲಯ, ದಾಖಲಾತಿಗಳ ಭಂಡಾರ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಯಜ್ಞಶಾಲೆ, ವೇದ ಪಾಠಶಾಲೆ, ಸತ್ಸಂಗ ಭವನ, ಪ್ರಸಾದ ವಿನಿಯೋಗ ಸ್ಥಳ, ಅಂಫಿ ಥಿಯೇಟರ್, ಧರ್ಮಶಾಲೆ, ಪ್ರದರ್ಶನಾಲಯ ಸೇರಿದಂತೆ ಹಲವು ಸೌಲಭ್ಯಗಳು ಮಂದಿರದ ಆವರಣದಲ್ಲಿ ನಿರ್ಮಾಣವಾಗಲಿವೆ.

ದೇಶದ ಮೂಲೆಮೂಲೆಗಳಿಗೂ ಶ್ರಾವ್ಯ, ದೃಶ್ಯ ಮಾಧ್ಯಮದ ಮೂಲಕ ಮಾಹಿತಿಯನ್ನು ತಲುಪಿಸಲಾಗುವುದು. ಚಿತ್ರರಂಗ ಕ್ಷೇತ್ರದ ಪ್ರಖ್ಯಾತರಾದ ಡಾ. ಚಂದ್ರಪ್ರಕಾಶ್ ದ್ವಿವೇದಿ ರಾಮಮಂದಿರದ ಇತಿಹಾಸ, ಈ ಅಭಿಯಾನದ ಮಾಹಿತಿಗಳನ್ನು ಒಳಗೊಂಡ ಸಾಕ್ಷ್ಯಚಿತ್ರವನ್ನು ರಚಿಸಿದ್ದಾರೆ.

ಈ ಸಾಕ್ಷ್ಯಚಿತ್ರವು ಖ್ಯಾತ ಸಿನಿಮಾ ನಟರಾದ ಶ್ರೀ ಅಕ್ಷಯ್ ಕುಮಾರ್ ಅವರ ಅಭಿಯಾನದ ಕುರಿತಾದ ನಿವೇದನೆ ಒಳಗೊಂಡಿರುತ್ತದೆ ಎಂದರು.

ಈ ಅಭಿಯಾನ ಹಾಗೂ ಮಂದಿರ ನಿರ್ಮಾಣ ಕೇವಲ ಮತ್ತೊಂದು ಮಂದಿರದ ನಿರ್ಮಾಣದಂತೆ ಅಲ್ಲ. ಇದು ಜಾಗೃತ ಹಿಂದೂಶಕ್ತಿಯ ಪುನರುತ್ಥಾನದ ಸಂಕೇತವಾಗಿದೆ. ಸಮಾಜವನ್ನು ಮೇಲು ಕೀಳು ಎಂಬ ಭಾವನೆಗಳಿಂದ ಮುಕ್ತಗೊಳಿಸುವ, ಬಡತನ, ಆರೋಗ್ಯ, ಶಿಕ್ಷಣ, ಕೌಶಲ್ಯದ ನ್ಯೂನತೆಗಳನ್ನು ನಿರ್ಮೂಲನೆ ಮಾಡುವ, ಮಹಿಳೆಯರ ಘನತೆಯನ್ನು ಮರುಸ್ಥಾಪಿಸುವ, ಭಯೋತ್ಪಾದನೆಯ ಉಪದ್ರವವನ್ನು ನಿರ್ಮೂಲನೆ ಮಾಡುವ ವೇದದ ಗುರಿಯಾದ ‘ಸರ್ವೇ ಭವಂತು ಸುಖಿನಃ’ (ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಆರೋಗ್ಯವಾಗಿರಲಿ, ಯಾರೂ ದುಃಖದಿಂದ ಬಳಲದಿರಲಿ) ಎಂಬ ಉದ್ದೇಶದಿಂದ ಕೂಡಿದೆ.
ಶ್ರೀರಾಮ ಮಂದಿರ ನಿರ್ಮಾಣ ವೈಶ್ವಿಕವಾಗಿ ಸಮಸ್ತ ಹಿಂದೂಗಳ ಹೆಗ್ಗುರಿಯಾಗಿದ್ದು ಇದನ್ನು ಸಾಧಿಸುವಲ್ಲಿ ಸಫಲರಾಗುತ್ತೇವೆ ಎಂದು ವಿಹಿಂಪ ನಂಬುತ್ತದೆ ಎಂದು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *