ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಜಿಲ್ಲೆಯ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಹುಬ್ಬಳ್ಳಿಯ ಭಾರತ ಎಕ್ಸ್ ಸರ್ವಿಸಸ್ ಏಜೆನ್ಸಿ ತನ್ನ ಹೊರಮೂಲ ಸಿಬ್ಬಂದಿಗಳ ESI ಮತ್ತು PF ಹಣವನ್ನು ನೀಡದೆ ವಂಚಿಸಿದೆ ಎಂದು ಆರೋಪಿಸಿ ನೂರಾರು ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಶುಕ್ರವಾರ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸೆಪ್ಟೆಂಬರ್ 2022 ಮಾರ್ಚ್ 2023 ರ ಅವಧಿಯಲ್ಲಿ ಸಮಾಜಕಲ್ಯಾಣ ಇಲಾಖೆಯ ಸುಮಾರು 250 ಹೊರಮೂಲ ಸಿಬ್ಬಂದಿಗಳನ್ನು ಭಾರತ ಎಕ್ಸ್ ಸರ್ವಿಸಸ್ ಏಜೆನ್ಸಿ ಹುಬ್ಬಳ್ಳಿ ಇವರು ಒದಗಿಸಿದ್ದರು.
250 ಹೊರಮೂಲ ಸಿಬ್ಬಂದಿಗಳನ್ನು ಸಮಾಜಕಲ್ಯಾಣ ವ್ಯಾಪ್ತಿಗೆ ಒಳಪಡುವ ಮೆಟ್ರಿಕ್ ಪೂರ್ವ/ ನಂತರದ ವಿದ್ಯಾರ್ಥಿನಿಲಯಗಳಿಗೆ ಹಾಗೂ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಪೂರೈಸಿದ್ದರು.
ಆದರೆ ಅವರು ತಮ್ಮ ಗುತ್ತಿಗೆಯ ಅವಧಿಯಲ್ಲಿ ಯಾವುದೇ ಒಬ್ಬ ಸಿಬ್ಬಂದಿಯ ESI ಮತ್ತು PF ವಂತಿಗೆ ಹಣವನ್ನು ಜಮಾ ಮಾಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸುರೇಶ ಕೋರಿ ಕಿಡಿಕಾರಿದರು.
ಇದನ್ನು ಗಮನಿಸಿದಾಗ ಅಂದಾಜು 25 ರಿಂದ 30 ಲಕ್ಷದವರೆಗೆ ESI ಮತ್ತು PF ಹಣವನ್ನು ಗುತ್ತಿಗೆದಾರರಾದ ಭಾರತ ಎಕ್ಸ್ ಸರ್ವಿಸಸ್ ಏಜೆನ್ಸಿ ಹುಬ್ಬಳ್ಳಿ ಇವರು ಲಪಾಟಿಸಿರುವ ಸಾಧ್ಯತೆ ಇದೆ ಎಂದು ದೂರಿದ್ದಾರೆ.
ಈ ಕುರಿತಾಗಿ ಈಗಾಗಲೇ ಹಲವಾರು ಬಾರಿ ಪ್ರತಿಭಟನೆಯನ್ನು ಮಾಡಿ, ಲಿಖಿತ ಮನವಿಯನ್ನು ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ ಹಾಗೂ ತಾಲೂಕು ಅಧಿಕಾರಿ ಶ್ರೀಮತಿ ಎಂ.ಬಿ. ಸಣ್ಷೇರಿ ಅವರು ಈವರೆಗೆ ಸಕರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ನಡೆಸಿದ್ದೇವೆ.
ಸದರಿ ಅವಧಿಯ ESI ಹಾಗೂ PF ವಂತಿಗೆ ಹಣವನ್ನು ಸಂಬಂಧಿಸಿದ ಹೊರಮೂಲ ಸಿಬ್ಬಂದಿಗಳ ಖಾತೆಗೆ ಜಮಾ ಮಾಡಿಸದಿರುವುದು ನೋಡಿದರೆ ಏಜೆನ್ಸಿಯವರು ಮತ್ತು ಇಲಾಖೆಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವ ಕುರಿತು ಶಂಕೆ ವ್ಯಕ್ತವಾಗುತ್ತದೆ ಎಂದು ಆಪಾದಿಸಿದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿಸಿದ ಬಡ ಹೊರಮೂಲ ಸಿಬ್ಬಂದಿಗಳಿಗೆ ನ್ಯಾಯ ಒದಗಿಸಬೇಕು ಹಾಗೂ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ತರ ವಿರುದ್ಧ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಸುರೇಶ ಕೋರಿ ಆಗ್ರಹಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಲಾಲ್ ಸಾಬ, ಲಕ್ಷ್ಮಿ ಜಾಧವ, ಉಳವಪ್ಪ, ಕರಿಯಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.