ಜನಜಾಗೃತಿ ಸಂಘದಿಂದ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜನೆ
ಧಾರವಾಡದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂರಾರು ಮಕ್ಕಳಿಗೆ ನೋಟ್ ಬುಕ್, ಎನ್ ೯೫ ಮಾಸ್ಕ್ ವಿತರಣೆ
ಧಾರವಾಡ prajakiran.com : ಧಾರವಾಡದ ಪೊಲೀಸ್ ಹೆಡ್ ಕ್ವಾಟರ್ಸ್ ಆವರಣದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನೂರಾರು ಮಕ್ಕಳಿಗೆ ನೋಟ್ ಬುಕ್ ಹಾಗೂ ಎನ್ 95 ಮಾಸ್ಕ್ ವಿತರಣೆ ಮಾಡುವ ಮೂಲಕ ಸ್ವಾಮಿ ವಿವೇಕಾನಂದರ 159ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಸಾಮಾಜಿಕ ಕಾರ್ಯಕರ್ತ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜಯಂತಿಯ ಅಂಗವಾಗಿ ಈ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದಲ್ಲದೆ, ಶಾಲೆಯ ಮಕ್ಕಳಿಗೆ ಚಿತ್ರಕಲೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಸ್ವಾಮಿ ವಿವೇಕಾನಂದರ ಚಿತ್ರ ಬರೆದು, ಭಾಷಣ ಮಾಡಿ, ಪ್ರಬಂಧ ಮಂಡಿಸಿ ಎಲ್ಲರ ಗಮನ ಸೆಳೆದರು.
ಈ ವೇಳೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ. ಅವರ ಚಿಂತನೆಗಳು ಇಂದಿಗೂ ಎಲ್ಲರಿಗೂ ದಾರಿದೀಪವಾಗಿವೆ. ಅವರ ಚಿಕಾಗೋ ಭಾಷಣ ಮೈ ಮನ ರೋಮಾಂಚನಗೊಳಿಸುವಂತಿದೆ. ಅವರ ಅನೇಕ ಸಾಮಾಜಿಕ ಚಿಂತನೆಗಳು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ಬಾಲನಂದನ ಟ್ರಸ್ಟ್ ಸದಸ್ಯ ನಾಗರಾಜ ಕಿರಣಗಿ ಮಾತನಾಡಿ, ಕರೋನಾದಂತಹ ಸಂಕಷ್ಟದ ಸಮಯದಲ್ಲಿ ಶಿಕ್ಷಣ, ಆರೋಗ್ಯ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಪ್ರತಿ ಮಗುವಿಗೆ ದೊರೆತರೆ ಮಾತ್ರ ಬಲಿಷ್ಟ ಹಾಗೂ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಸ್ವಾಮಿವಿವೇಕಾನಂದರ ಜಯಂತಿಯ ಸಂದರ್ಭದಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ನೂರಾರು ಮಕ್ಕಳಿಗೆ ಎನ್ 95 ಮಾಸ್ಕ್ ಹಾಗೂ ನೋಟ್ ಬುಕ್ ವಿತರಣೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದನ್ನು ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಸರಕಾರಿ ಶಾಲೆಗಳಲ್ಲಿ ಮಾಡಬೇಕಿದೆ. ಇದರಿಂದಾಗಿ ಸಾಮಾಜಿಕ ಬದಲಾವಣೆ ಹಾಗೂ ಸರಕಾರಿ ಶಾಲೆಗಳ ಸುಧಾರಣೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಚಿಂತಿಸಬೇಕಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸುಮಂಗಲಾ ಬಸವರಾಜ ಕೊರವರ, ಜಯಶ್ರೀ ಪವಾರ, ಸುರೇಶ ಪವಾರ, ಕುಮಾರ ಅಗಸಿಮನಿ, ಆನಂದ ಪಾಟೀಲ್, ಪ್ರಮೋದ ಹರಕುಣಿ, ನವೀನ ಪ್ಯಾಟಿ, ಬಸವರಾಜ ಶೀಲವಂತರ, ಬಸವರಾಜ ಧಾರವಾಡ, ಈರಣ್ಣ ಬಂಡಾರಿಮಠ, ಶಾಲೆಯ ಶಿಕ್ಷಕರಾದ ಜಿ.ಎಂ. ಮುಗಳಿ, ಎಸ್. ಆರ್. ಕರಿಗಾರ, ಜಿ.ಟಿ. ಕುರುಬರ, ಮಂಜುಳಾ ಪಿ.ಜಿ, ರಾಠೋಡ ಪ್ರಕಾಶ ಉಪಸ್ಥಿತರಿದ್ದರು.