*ಕ್ಷೇತ್ರ ಬದಲಾವಣೆ ಸಾಧ್ಯವಿಲ್ಲ ಎಂದ ಯಡಿಯೂರಪ್ಪ*
*ಸ್ವಾಮೀಜಿಗಳ ಜೊತೆ ನಾನೇ ಮಾತನಾಡಿ ಮನವೊಲಿಸುತ್ತೇನೆ*
ಹುಬ್ಬಳ್ಳಿ ಪ್ರಜಾಕಿರಣ.ಕಾಮ್: ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬದಲಾವಣೆಗೆ ನಾಡಿನ ಮಠಾಧೀಶರ ಹಕ್ಕೊತ್ತಾಯ ಮಂಡಿಸಿದ ಬೆನ್ನಲ್ಲೇ ಹುಬ್ಬಳ್ಳಿಗೆ ದೌಡಾಯಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾಜದ ಮುಖಂಡರ ಜೊತೆಗೆ ಸಮಾಲೋಚನೆ ನಡೆಸಿದರು.
ಆ ಬಳಿಕ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಜೊತೆಗೆ ಚರ್ಚಿಸಿ, ಯಾವುದೇ ಕಾರಣಕ್ಕೂ ಅಂಜದೆ, ಅಳುಕದೆ ಚುನಾವಣೆ ಎದುರಿಸುವಂತೆ ಅಭಯ ನೀಡಿದರು.
ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಪ್ರಹ್ಲಾದ ಜೋಶಿಯವರ ಲೋಕಸಭಾ ಕ್ಷೇತ್ರ ಬದಲಾವಣೆ ಸಾಧ್ಯವಿಲ್ಲ.
ಸ್ವಾಮೀಜಿಗಳಿಗೆ ಅವರ ವಿಷಯದಲ್ಲಿ ತಪ್ಪು ತಿಳುವಳಿಕೆ ಆಗಿದೆ. ಅವರ ಜೊತೆಗೆ ಸ್ವತಃ ನಾನೇ ಮಾತನಾಡಿ ಅವರೆಲ್ಲರ ಮನವೊಲಿಸುತ್ತೇನೆ.
ಲಕ್ಷಾಂತರ ಮತಗಳಿಂದ ಜೋಶಿ ಅವರು ಈ ಬಾರಿ ಸಹ ಗೆಲುವು ಸಾಧಿಸಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾತನಾಡಿ, ದಿಂಗಾಲೇಶ್ವರ ಶ್ರೀಗಳ ಜೊತೆಗೆ ನನಗೆ 30 ವರ್ಷಗಳ ಸಂಬಂಧವಿದೆ. ಅವರ ಮಠದ ಬಗ್ಗೆ ಹಾಗೂ ವಿಶೇಷವಾಗಿ ಅವರ ಮೇಲೆ ನನಗೆ ಗೌರವ ಇದೆ.
ಅವರಿಗೆ ಆಗಿರುವ ತಪ್ಪು ತಿಳುವಳಿಕೆ ಸರಿಪಡಿಸಿಕೊಳ್ಳಲಾಗುತ್ತದೆ. ಅವರ ಹೇಳಿಕೆಯನ್ನ ಆಶೀರ್ವಾದ ಎಂದು ಸ್ವೀಕರಿಸುವೆ. ಕೆಲವು ವೈಯಕ್ತಿಕ ಹೇಳಿಕೆಗೆ ಉತ್ತರ ಕೊಡಲು ಹೋಗುವುದಿಲ್ಲ.
ಏಕೆಂದರೆ ನನ್ನ ಮಗಳ ಮದುವೆ ಆಗಿ ಒಂದೂವರೆ ವರ್ಷ ಆಯಿತು. ತಿರುಗಿ ಮಗು ಹುುಟ್ಟಿದೆ. ಈಗ ನಮಗೆ ಮದುವೆಗೆ ಕರೆದು ಅವಮಾನ ಮಾಡಿದರು ಎಂದು ಹೇಳುವುದು ತಪ್ಪಾಗುತ್ತದೆ ಎಂದು ಸ್ಪಷ್ಟಪಡಿಸಿದರು.