*ಮಹಿಳಾ ಮೇಯರ್ ಗೆ ರಾಜ್ಯ ಸರ್ಕಾರದ ಅಗೌರವ*
ಧಾರವಾಡ ಪ್ರಜಾಕಿರಣ.ಕಾಮ್ : ನೂತನ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರ ನೇಮಕಕ್ಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಈ ಬಗ್ಗೆ ಬಹಿರಂಗವಾಗಿ ಪತ್ರ ಸಮರ ಸಾರಿದ್ದಾರೆ.
ಅವರ ಪತ್ರದ ಸಾರಾಂಶ ಹೀಗಿದೆ.
ಮಹಾನಗರ ಜನತೆಯ ವತಿಯಿಂದ ಡಾ. ಈಶ್ವರ ಅವರನ್ನು ಹಾರ್ದಿಕವಾಗಿ ಸ್ವಾಗತವನ್ನು ಕೋರುತ್ತೇವೆ. ಮುಂದಿನ ದಿನಗಳಲ್ಲಿ ನೂತನ ಆಯುಕ್ತರಿಗೆ ಮಹಾನಗರ ಪಾಲಿಕೆಯ ಆಡಳಿತದಲ್ಲಿ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಕೈಗೊಳ್ಳುವ ಎಲ್ಲಾ ಯಶಸ್ವಿ ಕಾರ್ಯಕ್ರಮಗಳಿಗೆ ಮಾಜಿ ಮಹಾಪೌರರಾದ ನಮ್ಮ ಮತ್ತು ಈಗಿನ ಆಡಳಿತ ಸದಸ್ಯರ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ಯಾವತ್ತೂ ನೀಡಲಾಗುವುದು.
ಆದಾಗ್ಯೂ ಪ್ರಸ್ತುತ ಸಮಯದಲ್ಲಿ ಮಾನ್ಯ ಆಯುಕ್ತರನ್ನು ನೇಮಕಮಾಡಿ ಆದೇಶವನ್ನು ಹೊರಡಿಸುವಲ್ಲಿ ಸರ್ಕಾರವು ಪೂಜ್ಯ ಮಹಾಪೌರರ ಜೊತೆಗೆ ಯಾವದೇ ಚರ್ಚೆ ಮಾಡದೇ ಮತ್ತು ಸಲಹೆಯನ್ನು ಪಡೆಯದೇ ನೇರವಾಗಿ ನೇಮಕ ಆದೇಶವನ್ನು ಹೊರಡಿಸಿರುವದು ಕರ್ನಾಟಕ ಪೌರ ಅಧಿನಿಯಮ ೧೪(೧) {” ಕಮೀಷನರ ಮತ್ತು ಅಧಿಕಾರಾವಧಿ ಇತ್ಯಾದಿ – (೧) – ಸರ್ಕಾರವು ಮೇಯರ್ ಅವರೊಂದಿಗೆ ಸಮಾಲೋಚನೆ ನಡೆಸಿದ ತರುವಾಯ ಕಮಿಷನರ್ ರವರನ್ನು ನೇಮಕಮಾಡತಕ್ಕದ್ದು.
.ಡಾ. ಈಶ್ವರ ಉಳ್ಳಾಗಡ್ಡಿ ರವರನ್ನು ಸರಕಾರ ನೇಮಕ ಮಾಡಿದ್ದು ಸಮಂಜಸವಾಗಿರುವದಿಲ್ಲ . ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಿಳಾ ಮಹಾಪೌರರಿಗೆ ತೋರಿದ ಅಗೌರವ ಎನ್ನುವದನ್ನು ಗಮನಿಸಬೇಕಾಗುತ್ತದೆ.
ಈ ರೀತಿಯ ರಾಜ್ಯಸರ್ಕಾರದ ಕ್ರಮಗಳು ಮಹಾನಗರ ಪಾಲಿಕೆಯ ಆಡಳಿತದಲ್ಲಿ ಸಮನ್ವಯತೆಯ ಕೊರತೆಯನ್ನು ಉಂಟುಮಾಡುವ ಅವಕಾಶಗಳನ್ನು ಕಲ್ಪಿಸಿದಂತಾಗುವದು.
ಆದಕಾರಣ ಮುಂದಿನ ದಿನಗಳಲ್ಲಿ ಸರ್ಕಾರವು ಯಾವದೇ ಆದೇಶಗಳನ್ನು ಹೊರಡಿಸುವಲ್ಲಿ ಕರ್ನಾಟಕ ಪೌರ ಅಧಿನಿಯಮಗಳನ್ನು ಅನುಸರಿಸಿ ಕ್ರಮವನ್ನು ತೆಗೆದುಕೊಳ್ಳುವದು ಸೂಕ್ತವಾಗಿರುತ್ತದೆ ಎಂದು ಮಾಜಿ ಮೇಯರ್ ಈರೇಶ ಅಂಚಟಗೇರಿ ಕಿಡಿಕಾರಿದ್ದಾರೆ