ಬೆಳಗಾವಿ prajakiran.com ಏ. 28 :
ಬೆಳಗಾವಿಯ ಬಳಿ ಇರುವ ಮಿಲಿಟರಿ ಪ್ರದೇಶವನ್ನು ಕರ್ನಾಟಕ ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಪಕ್ಕ ದಲ್ಲಿರುವ ಮಿಲಿಟರಿ ಪ್ರದೇಶ ಸ್ವಾಧೀನತೆ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ರಕ್ಷಣಾ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇಲ್ಲಿನ ವಸ್ತುಸ್ಥಿತಿಯ ವರದಿಯನ್ನು ಕೇಂದ್ರ ಸರ್ಕಾರ ತರಿಸಿಕೊಳ್ಳುತ್ತಿದೆ. ಈ ಪ್ರದೇಶವನ್ನು ಮಿಲಿಟರಿಯವರೇ ಬಳಸಿಕೊಳ್ಳುತ್ತಿದ್ದಾರೆ.
ಆದರೆ ಆ ಪ್ರದೇಶ ಕೇಂದ್ರ ರಕ್ಷಣಾ ಇಲಾಖೆಗೆ ಸೇರಿರುವುದಿಲ್ಲ. ಕಂದಾಯದ ಹೆಸರಿನಲ್ಲಿಯೇ ಇದೆ. ಈ ಎಲ್ಲ ಮಾಹಿತಿಗಳನ್ನು ಕೇಂದ್ರ ರಕ್ಷಣಾ ಇಲಾಖೆ ನೀಡಲಾಗಿದ್ದು, ಇನ್ನಷ್ಟು ಒತ್ತಡ ಹೇರುವ ಮೂಲಕ ಆ ಮಿಲಿಟರಿ ಪ್ರದೇಶವನ್ನು ಕರ್ನಾಟಕ ಸರ್ಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಪಕ್ಷದ ವರಿಷ್ಟರು ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಂಡ ನಂತರ ಮಾಹಿತಿ ಒದಗಿಸಲಾಗುವುದು ಎಂದರು.
ಬೆಳಗಾವಿ ವಿಮಾನನಿಲ್ದಾಣಕ್ಕೆ ರಾಣಿಚೆನ್ನಮ್ಮ ಎಂದು ಹೆಸರಿಡುವ ಬಗ್ಗೆ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.