ಧಾರವಾಡ prajakiran.com : ಕೊರೋನಾ ಸಂಕಷ್ಟದ ಸಮಯದಲ್ಲಿ ಕಲಘಟಗಿ ಕ್ಷೇತ್ರದ ಜನರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿರುವ ನಾಗರಾಜ ಛಬ್ಬಿ ಹಾಗೂ ಮಾಜಿ ಸಚಿವ ಸಂತೋಷ ಲಾಡ್ ಬಣದ ನಡುವೆ ತಿಕ್ಕಾಟ ಜೋರಾಗಿದೆ.
ಛಬ್ಬಿ ಜಿಲ್ಲೆಯವರು, ಲಾಡ್ ಹೊರ ಜಿಲ್ಲೆಯವರು ಆಗ ಎಲ್ಲಿದ್ದರು. ಈಗೇಕೆ ಬಂದರು ಎಂಬುದು ಕೆಲವರ ವಾದ. ಹೀಗಾಗಿ ಬುಧವಾರ ಮುಗದ ಕ್ರಾಸ್ ಬಳಿ ಲಾಡ್ ಅವರಿಗೆ ನಾಗರಾಜ ಛಬ್ಬಿ ಬಣದ ಕೆಲವರು ನಡುರಸ್ತೆಯಲ್ಲಿ ತಡೆದು ಅಡ್ಡಿ ಪಡಿಸಿದ ಘಟನೆ ನಡೆಯಿತು.
ಅವರು ಅಳ್ನಾವರದಲ್ಲಿ ಉಚಿತ ಊಟದ ಸೇವೆಗೆ ಚಾಲನೆ ಕೊಟ್ಟು
ಮುಗದ ಕ್ರಾಸ್ನಲ್ಲಿ ಗ್ರಾಮಕ್ಕೆ ಹೋಗುವಾಗ ಇನ್ನೊಂದು ಕಾಂಗ್ರೆಸ್ ಬಣ (ಛಬ್ಬಿ) ಕಡೆಯವರು ಅಡ್ಡಿಪಡಿಸಲು ಮುಂದಾದರು.
ಆಗ ಊರಿನ ಗ್ರಾಮಸ್ಥರು ಬಂದು ಅವರಿಗೆ ಒಳಗೆ ಕರೆದುಕೊಂಡು ಹೋದರು.
ಕಿಟ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಲಾಡ್, ನೀವು ಬಡವರ ಸೇವೆ ಮಾಡಿ ಅದನ್ನು ಬಿಟ್ಟು ರಾಜಕೀಯ ಮಾಡುವುದು ಬೇಡ ಎಂದು ಕುಟುಕಿದರು.
ನಮ್ಮ ಸ್ನೇಹಿತರಿಗೆ ಕಳಕಳಿಯ ಮನವಿ. ನಾನು ಯಾವುದೇ ಕೆಲಸ ಮಾಡಿದರೂ ಜನರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದೇನೆ.
ನಮ್ಮನ್ನು ನಡು ರಸ್ತೆಯಲ್ಲಿ ನಿಲ್ಲಿಸುವುದು ಒಳ್ಳೆಯ ರಾಜಕೀಯವಲ್ಲ, ನಮ್ಮನ್ನು ಪ್ರಶ್ನೆ ಮಾಡುತ್ತೀರಾ,
ಇಂತಹ ಸಾಹಸಕ್ಕೆ ಹೋಗುವುದು ಬೇಡ, ನನಗೆ ಈ ರೀತಿ ಮಾಡುವುದರಿಂದ ಮುಂದೆ ಜನರು ನಿಮಗೂ ಇದೇ ರೀತಿ ಮಾಡುತ್ತಾರೆ ಎಂಬುದು ಮರೆಯದಿರಿ ಎಂದು ಗುಡುಗಿದರು.
ನಾವು ಎಲ್ಲರೂ ಗೆಳೆಯರೇ, ಈ ಕಷ್ಟದ ಸಮಯದಲ್ಲಿ ಸಹಾಯ ಮಾಡಿ, ಇದರಲ್ಲಿ ರಾಜಕೀಯ ಬೆರಸುವುದು ಬೇಡ ಎಂದು ಬುದ್ದಿ ಮಾತು ಹೇಳಿದರು.