ಧಾರವಾಡ prajakiran.com : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 1.30 ಲಕ್ಷ ನೌಕರರಿಗೆ ಆರನೇ ವೇತನ ಆಯೋಗ ಸೇರಿದಂತೆ ವಿವಿಧ ಪ್ರಾಮಾಣಿಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್.ನೀರಲಕೇರಿ ಅವರು ಕಳೆದ ಒಂದು ವಾರದಿಂದ ನಡೆಸುತ್ತಿರುವ ನಿರಂತರವಾದ ಹೋರಾಟದ ಬೆನ್ನಲ್ಲೇ ಬುಧವಾರದಿಂದ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದರು.
ಅವರಿಗೆ ಜೆಡಿಯು ಜಿಲ್ಲಾಧ್ಯಕ್ಷ ಶ್ರೀಶೈಲ ಗೌಡ ಕಮತರ, ಸಾರಿಗೆ ನೌಕರರ ಸಂಘಟನೆ, ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬೆಂಬಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪಿ.ಎಚ್. ನೀರಲಕೇರಿ, ನೌಕರರ ಮೇಲೆ ಎಸ್ಮಾ ಜಾರಿ ಮಾಡುವುದಾಗಿ ಹೆದರಿಸುವ ಸಿಎಂ ಬಿ.ಎಸ್ ವೈ, ಸಾರಿಗೆ ಸಚಿವ ಲಕ್ಷ್ಮಣ ಸವದಿಯ ಬಾಲಿಷತನದ ಹೇಳಿಕೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಉದ್ಘಟತನದ ಹೇಳಿಕೆಯನ್ನು ಸಹಿಸುವುದಿಲ್ಲ.
ಕಾರ್ಮಿಕ ಕಾನೂನು ಪ್ರಕಾರ ಮೊದಲು ಸೌಲಭ್ಯ ನೀಡಿ. ದಿನದ 24 ಗಂಟೆಗಳ ಕಾಲ ಸೇವೆ ತೆಗೆದುಕೊಂಡು ದೌರ್ಜನ್ಯ, ದಬ್ಬಾಳಿಕೆ ಹಾಗೂ ಬೆದರಿಕೆ ತಂತ್ರಗಳಿಗೆ ಈ ಬಾರಿ ನೌಕರರು ಜಗ್ಗಲ್ಲ ಎಂಬುದನ್ನು ಅರಿತುಕೊಳ್ಳಿ ಎಂದು ಪಿ.ಎಚ್. ನೀರಲಕೇರಿ ಗುಡುಗಿದ್ದಾರೆ.