ಕಾಸರಗೋಡು Prajakiran.com : ಕೇರಳ ವಿಧಾನಸಭೆಯ ಒಟ್ಟು 140 ಕ್ಷೇತ್ರಗಳ ಪೈಕಿ 89 ಸ್ಥಾನಗಳಲ್ಲಿ ಆಡಳಿತಾರೂಢ ಎಡರಂಗ ಒಕ್ಕೂಟವು ಭಾರೀ ಮುನ್ನಡೆ ಸಾಧಿಸಿದೆ.
ವಿಪಕ್ಷ ಐಕ್ಯರಂಗ ಒಕ್ಕೂಟವು 48 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು 3 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಬಿಜೆಪಿ ಅಭ್ಯರ್ಥಿಗಳಾದ ನೇಮಂ ಕ್ಷೇತ್ರದಲ್ಲಿ ಕುಮ್ಮನಂ ರಾಜಶೇಖರನ್, ಪಾಲಕ್ಕಾಡು ಕ್ಷೇತ್ರದಲ್ಲಿ ಮೆಟ್ರೋಮೆನ್ ಇ.ಶ್ರೀಧರನ್, ತೃಶೂರು ಕ್ಷೇತ್ರದಲ್ಲಿ ಸುರೇಶ್ ಗೋಪಿ ಮುನ್ನಡೆ ಸಾಧಿಸಿದ್ದಾರೆ.
ಇದೇ ವೇಳೆ ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಐಕ್ಯರಂಗ ಹಾಗೂ ಎರಡರಲ್ಲಿ ಎಡರಂಗ ಮುನ್ನಡೆಯಲ್ಲಿದೆ. ಮಂಜೇಶ್ವರ, ಕಾಸರಗೋಡು, ಉದುಮ ವಿಧಾನಸಭಾ ಕ್ಷೇತ್ರಗಳಲ್ಲಿ ಐಕ್ಯರಂಗವು ಮುನ್ನಡೆ ಸಾಧಿಸಿದರೆ, ಕಾಂಗಾಡು, ತೃಕ್ಕರೀಪ್ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಎಡರಂಗವು ಮುನ್ನಡೆ ಸಾಧಿಸಿದೆ.