ಬೆಂಗಳೂರು ಪ್ರಜಾಕಿರಣ. ಕಾಮ್ : ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ ಪೂರ್ವಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರು ಭಾನುವಾರ ಅಧಿಕೃತವಾಗಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷವನ್ನು ಸೇರ್ಪಡೆಗೊಂಡರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಯಾವುದೇ ಆಸೆ, ಆಮಿಷ ಹಾಗೂ ಷರತ್ತುಗಳಿಲ್ಲದೆ ಸೇರ್ಪಡೆಯಾಗಿದ್ದೇನೆ ಎಂದು ಪ್ರಕಟಿಸಿದರು.
ಅಲ್ಲದೆ, ಈ ಬಾರಿ ಹುಬ್ಬಳ್ಳಿಯ ಗಂಡು ಮೆಟ್ಟಿದ ನಾಡಿನಲ್ಲಿ ಜೆಡಿಎಸ್ ಬಾವುಟ ಹಾರಿಸುವ ಮೂಲಕ ನಾಡಿಗೆ ಹೊಸ ಸಂದೇಶ ಸಾರೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೂರು ದಶಕಗಳ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಹಾಲಹರವಿ ಕಳೆದ ಬಾರಿಯ ಚುನಾವಣೆಯಲ್ಲಿ
ಟಿಕೇಟ್ ವಂಚಿತರಾಗಿದ್ದರು.
ಹೀಗಾಗಿ ಈ ಬಾರಿಯೂ ಮತ್ತೆ ಟಿಕೇಟ್ ಕೈ ತಪ್ಪುವ ಸಾಧ್ಯತೆ ಅರಿತು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಕಮಲಕ್ಕೆ ದೊಡ್ಡ ಶಾಕ್ ಕೊಟ್ಟಿದ್ದಾರೆ.
2008 ರಲ್ಲಿ ಹುಬ್ಬಳ್ಳಿಯ ಪೂರ್ವ ಮೀಸಲು ಕ್ಷೇತ್ರದಲ್ಲಿ ಗೆದ್ದು ಬಂದಿದ್ದ ವೀರಭದ್ರಪ್ಪ ಅವರಿಗೆ 2018ರಲ್ಲಿ ಕೈ ಕೊಟ್ಟು ಟಿಕೆಟ್ ಅನ್ನು ಚಂದ್ರಶೇಖರ ಗೋಕಾವಿಗೆ ಅವರಿಗೆ ನೀಡಲಾಗಿತ್ತು.
ಇಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದ ಪ್ರಸಾದ ಅಬ್ಬಯ್ಯ ಗೆದ್ದು ಬಂದಿದ್ದರು. ಕಳೆದ ಬಾರಿ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾ ಹಣಿ ನಡೆದಿತ್ತು.
ಆದರೆ ಈ ಬಾರಿ ಜೆಡಿಎಸ್ ಸೇರಿ, ತಮ್ಮ ರಾಜಕೀಯ ಭವಿಷ್ಯ ಎದುರಿಸಲು ಸಜ್ಜಾಗಿದ್ದಾರೆ.
ವೀರಭದ್ರಪ್ಪ ಹಾಲಹರವಿಯವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ಸೃಷ್ಟಿ ಮಾಡಲಾಗಿತ್ತು. ಆದರೂ ಯಾರೊಬ್ಬರೂ ಕೂಡ ಅದನ್ನು ಸರಿಪಡಿಸುವ ಗೋಜಿಗೆ ಹೋಗಿರಲಿಲ್ಲ.
ಹೀಗಾಗಿ ಹುಬ್ಬಳ್ಳಿ ಪೂರ್ವ ವಿಧಾನ ಸಭಾ ಕ್ಷೇತ್ರದ ಚುನಾವಣೆ ಭಾರೀ ಮಹತ್ವ ಪಡೆದಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತವರು ಜಿಲ್ಲೆಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.