ಹುಬ್ಬಳ್ಳಿ prajakiran.com : ವಿವಾದಿತ ವಿಡಿಯೋ ಪೋಸ್ಟ್ ಮಾಡಿದ ಹುಬ್ಬಳ್ಳಿಯ ಯುವಕ ಅಭಿಷೇಕ ಹಿರೇಮಠನನ್ನು ಹುಬ್ಬಳ್ಳಿಯ ನಾಲ್ಕನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಏಪ್ರಿಲ್ 30ರವರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅಭಿಷೇಕ ಹಿರೇಮಠ ಪರ ವಕೀಲರಾದ ಸಂಜೀವ ಬಡಸ್ಕರ, ಅಭಿಷೇಕ ಹಿರೇಮಠ ಪರವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದು ವಕೀಲರ ಸಂಘಟನೆಯಿಂದ ವಕಾಲತ್ತು ಸಲ್ಲಿಸಿದ್ದೇವೆ.
ಈ ಕುರಿತು ಹುಬ್ಬಳ್ಳಿ ನಾಲ್ಕನೇ ಜೆ.ಎಂ.ಎಫ್.ಸಿ ಹೆಚ್ಚುವರಿ ನ್ಯಾಯಾಲಯ ಏಪ್ರಿಲ್ 30ರ ವರೆಗೆ ಆತನನ್ನು ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ ಎಂದರು.
ಇನ್ನೂ ನಾಳೆ ಪೊಲೀಸರ ಪರ ಹಾಗೂ ಸರ್ಕಾರದ ಪರ ತಕರಾರು ಸಲ್ಲಿಸಿದ ಬಳಿಕ ನಾವು ಅಭಿಷೇಕ ಹಿರೇಮಠ ಪರವಾಗಿ ಪ್ರಬಲವಾಗಿ ವಾದ ಮಂಡಿಸುತ್ತೇವೆ ಎಂದರು.
ನಮ್ಮ ಜೊತೆಗೆ ದೊಡ್ಡಮಟ್ಟದ ವಕೀಲರ ತಂಡವಿದೆ. ನಮಗೆ ವಿಶ್ವಾಸವಿದೆ ಪ್ರಬಲವಾಗಿ ವಾದ ಮಂಡಿಸಿ ಜಾಮೀನು ಪಡೆಯುವ ವಿಶ್ವಾಸವಿದೆ ಎಂದರು.
ಇಂದು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದೇವೆ. ನಾಳೆ ಸರ್ಕಾರದ ಪರ ತಕರಾರು ಸಲ್ಲಿಸಿದ ಮೇಲೆ ನಾವು ವಾದ ಮಂಡಿಸುತ್ತೇವೆ.
ಅಲ್ಲದೇ ಅಭಿಷೇಕ ಹಿರೇಮಠ ಕಾಲೇಜು ವಿದ್ಯಾರ್ಥಿಯಾಗಿದ್ದು, ನ್ಯಾಯಾಲಯದ ಪರವಾನಿಗೆ ಪಡೆದು ಪರೀಕ್ಷೆ ಬರೆಯಲು ಅವಕಾಶವನ್ನು ಪಡೆದುಕೊಳ್ಳುತ್ತೇವೆ ಎಂದು ವಕೀಲ ಸಂಜೀವ ಬಡಸ್ಕರ್ ಹೇಳಿದರು.