ಧಾರವಾಡ prajakiran.com : ೨೦೨೦-೨೧ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಹಾಗೂ ಉದ್ದಿನಕಾಳನ್ನು ಜಿಲ್ಲೆಯ ರೈತರಿಂದ ಖರೀದಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಸೋಮವಾರ ಸೆ.೨೧ ರಿಂದ ರೈತರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳನ್ನು ಪ್ರತಿ ಕ್ವಿಂಟಲ್ ಗೆ ೭,೧೯೬ ರೂ.ಗಳಂತೆ ಪ್ರತಿ ರೈತರಿಂದ ಗರಿಷ್ಠ ೪ ಕ್ವಿಂಟಲ್ ಖರೀದಿಸಲಾಗುವುದು. ಎಫ್.ಎ.ಕ್ಯೂ ಗುಣಮಟ್ಟದ ಉದ್ದಿನ ಕಾಳನ್ನು ಪ್ರತಿ ಕ್ವಿಂಟಲ್ ಗೆ ೬.೦೦೦ ರೂ.ಗಳಂತೆ ಪ್ರತಿ ರೈತರಿಂದ ಎಕರೆಗೆ ೩ ಕ್ವಿಂಟಲ್ ಅಥವಾ ಗರಿಷ್ಠ ೬ ಕ್ವಿಂಟಲ್ ಖರೀದಿಸಲು ಸರ್ಕಾರ ಸೂಚಿಸಿದೆ.
ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯು ನಾಫೆಡ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ, ಕೃಷಿ, ತೋಟಗಾರಿಕೆ, ರೇಷ್ಮೆ, ಸಹಕಾರ ಇಲಾಖೆಗಳು ಹಾಗೂ ಸಂಬಂಧಿಸಿದ ಖರೀದಿ ಏಜೆನ್ಸಿಗಳೊಂದಿಗೆ ಶುಕ್ರವಾರ ಸೆ.೧೮ ರಂದು ಸಮನ್ವಯ ಸಭೆ ನಡೆಸಿ, ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ರೈತರಿಗೆ ಅಗತ್ಯವಿರುವ ಕಡೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು.
ಎಫ್.ಎ.ಕ್ಯೂ ಗುಣಮಟ್ಟದ ಫಸಲು ಹಾಗೂ ನೋಂದಣಿ, ಖರೀದಿ ಪ್ರಕ್ರಿಯೆ ಬಗ್ಗೆ ರೈತರಿಗೆ ಸಮರ್ಪಕವಾದ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕ ಡಾ. ಪ್ರಭಾಕರ ಅಂಗಡಿ ಮಾತನಾಡಿ, ರೈತರಿಂದ ಹೆಸರು ಹಾಗೂ ಉದ್ದಿನ ಕಾಳನ್ನು ಖರೀದಿ ಕೇಂದ್ರಗಳ ಮೂಲಕ ಖರೀದಿಸಲಿದೆ.
ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಉತ್ಪನದ ಮೌಲ್ಯವು ನೇರ ವರ್ಗಾವಣೆ ಮೂಲಕ ಜಮಾ ಆಗಲಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ತೋಟಗಾರಿಕೆ ಉಪನಿರ್ದೇಶಕ ಕಾಶಿನಾಥ ಸೇರಿದಂತೆ ಸಹಕಾರ ಇಲಾಖೆ, ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.