ಬೆಂಗಳೂರು prajakiran.com : ರಾಜ್ಯದಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 378 ಜನರಿಗೆ ಕರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೇಟಿನ್ ಖಚಿತಪಡಿಸಿದೆ.
ಆ ಮೂಲಕ ಕರುನಾಡಿನ ಕರೋನಾ ಸೋಂಕಿತರ ಸಂಖ್ಯೆ 5 ಸಾವಿರ ಗಡಿ ದಾಟಿದಂತಾಗಿದ್ದು, 5213ಕ್ಕೆ ಏರಿಕೆಯಾದಂತಾಗಿದೆ.
ಅಲ್ಲದೆ, ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗಿದೆ. ಶನಿವಾರ ರಾಜ್ಯದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 59ಕ್ಕೆ ಏರಿದೆ.
ರಾಜ್ಯದಲ್ಲಿ ಶನಿವಾರ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಮಹಿಳೆಯರೇ ಆಗಿದ್ದಾರೆ. ಬೀದರ ನಲ್ಲಿ 55 ವರ್ಷದ ಮಹಿಳೆ ಸಾವನ್ನಪ್ಪಿದ್ದರೆ ವಿಜಯಪುರ ನಲ್ಲಿ 82 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ರಾಜ್ಯದ ರಾಜಧಾನಿ ಬೆಂಗಳೂರಿಗೆ ಕರೋನಾ ಅಟ್ಟಹಾಸ ಕಾಡುತ್ತಲೇ ಇದೆ. ಇವತ್ತು ಪತ್ತೆಯಾದ ಬೆಂಗಳೂರಿನ 18 ಜನರ ಪೈಕಿ 7 ಜನರಿಗೆ ಟ್ರಾವೆಲ್ ಹಿಸ್ಟರಿಯೇ ಸಿಕ್ಕಿಲ್ಲ. ಯಾರಿಂದ ಸೋಂಕು ಬಂತು ಎಂಬ ಮಾಹಿತಿ ಪತ್ತೆಯಾಗಿಲ್ಲ. ಈ ಡೆಡ್ಲಿ ವೈರಸ್ ಬೆಂಗಳೂರಿಗರಿಗೆ ಆತಂಕ ಹೆಚ್ಚಿಸಿದೆ.
ಇಂದು ಅತಿ ಹೆಚ್ಚು ಸೋಂಕಿತರು ಉಡುಪಿಯಲ್ಲಿ 121, ಯಾದಗಿರಿಯಲ್ಲಿ 103 ಕರೋನಾ ಪಾಸಿಟಿವ್ ಪತ್ತೆಯಾಗಿದ್ದರೆ ಕಲಬುರಗಿಯಲ್ಲಿ 69, ದಕ್ಷಿಣ ಕನ್ನಡದಲ್ಲಿ 24 ಪ್ರಕರಣ ಖಚಿತಗೊಂಡಿವೆ.
ವಿಜಯಪುರ 6, ದಾವಣಗೆರೆ 6, ಬೆಳಗಾವಿ 5, ಗದಗದಲ್ಲಿ 4, ಮಂಡ್ಯ 3, ಧಾರವಾಡದಲ್ಲಿ 3, ಹಾಸನ 3, ಹಾವೇರಿ 3, ಉತ್ತರಕನ್ನಡದಲ್ಲಿ 2, ರಾಯಚೂರ 2, ಕೋಲಾರ , ಕೊಪ್ಪಳ ಹಾಗೂ ಬೀದರನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ಆ ಮೂಲಕ ರಾಜ್ಯದ ನಂಬರ್ ಒನ್ ಸ್ಥಾನ ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆಯಾದರೆ ಕಲಬುರಗಿ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ 621 ಸೋಂಕಿತರಿದ್ದಾರೆ. ಮಹಾರಾಷ್ಟ್ರದಿಂದ ವಲಸೆ ಬಂದ ಕಾರ್ಮಿಕರೇ ಹೆಚ್ಚಿನಸಂಖ್ಯೆಯಲ್ಲಿದ್ದಾರೆ.