ಧಾರವಾಡ ಪ್ರಜಾಕಿರಣ.ಕಾಮ್ : ಮನೆಯ ಮೇಲೆ ಕ್ರಿಕೆಟ್ ಆಡಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ 15 ವರ್ಷದ ಬಾಲಕನೊಬ್ಬ ಸಾವಿಗೀಡಾಗಿದ ಘಟನೆ ಧಾರವಾಡದ ಮದಿಹಾಳದಲ್ಲಿ ಸಂಭವಿಸಿದೆ.
ಮದಿಹಾಳದ ಸಿದ್ದರಾಮೇಶ್ವರ ಕಾಲೋನಿಯ ಶ್ರೇಯಸ್ ಸಿನ್ನೂರ (15) ಎಂಬ ಬಾಲಕನೇ ಸಾವಿಗೀಡಾದವ.
ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಶ್ರೇಯಸ್ನಿಗೆ ವಿದ್ಯುತ್ ತಂತಿ ಸ್ಪರ್ಶಿಸಿದೆ.
ಇದರಿಂದ ಶ್ರೇಯಸ್ ಸ್ಥಳದಲ್ಲೇ ಅಸುನೀಗಿದ್ದಾನೆ. ಇದನ್ನು ಕಂಡ ಪ್ರಣವ್ ಗಳಗಿ ಎಂಬ ಹತ್ತು ವರ್ಷದ ಬಾಲಕ, ಶ್ರೇಯಸ್ನ ರಕ್ಷಣೆಗೆ ಮುಂದಾಗಿದ್ದಾನೆ.
ಆ ಬಾಲಕನ ಕೈಗೂ ವಿದ್ಯುತ್ ಸ್ಪರ್ಶಿಸಿ ಆತನಿಗೂ ಸುಟ್ಟ ಗಾಯಗಳಾಗಿವೆ.
ಸಾವನ್ನಪ್ಪಿದ ಶ್ರೇಯಸ್ನ ಮೃತ ಶರೀರವನ್ನು ಧಾರವಾಡದ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ವಿದ್ಯುತ್ ಸ್ಪರ್ಶಿಸಿ ಗಾಯಗೊಂಡಿರುವ ಪ್ರಣವ್ ಎಂಬ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಧಾರವಾಡದ ಶಹರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.