ಬೆಳಗಾವಿ prajakiran.com : ಕರೋನಾ ಲಾಕ್ ಡೌನ್ ನಡುವೆ ಕೆ ಬಿಜೆಪಿ ಶಾಸಕರು ರಹಸ್ಯವಾಗಿ ಸಭೆ ನಡೆಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯವೈಖರಿ ವಿರುದ್ದಅಸಮಾಧಾನ ಹೊರ ಹಾಕಿದ್ದಾರೆ.
ಅಚ್ಚರಿಯ ಬೆಳವಣಿಗೆಯೆಂದರೆ ಈ ಸಭೆಯ ನೇತೃತ್ವವನ್ನು ಸಚಿವಸ್ಥಾನ ಸಿಗದೆ ಸಿಟ್ಟಿಗೆದ್ದಿರುವ ಮಾಜಿ ಸಚಿವ ಉಮೇಶ ಕತ್ತಿ ಸಾರಥ್ಯವಹಿಸಿದ್ದರು ಎಂದು ತಿಳಿದುಬಂದಿದೆ.
ಈ ಸಭೆಯಲ್ಲಿ ಬಿಜೆಪಿಯ ಫೈರ್ ಬ್ರಾಂಡ್ ಬಸನಗೌಡ ಪಾಟೀಲ ಯತ್ನಾಳ, ಮಹಾದೇವ್, ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳ 25ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ ರಾಜ್ಯಸಭೆಗೆ ಮಾಜಿ ಸಂಸದ ರಮೇಶ ಕತ್ತಿಯ ಹೆಸರು ಶಿಫಾರಸ್ಸು ಮಾಡುವಂತೆ ಒತ್ತಡ ಹೇರಲು ಈ ಸಭೆ ನಡೆಸಲಾಗಿತ್ತು. ಈ ವೇಳೆ ಅನೇಕರು ಬಹಿರಂಗವಾಗಿಯೇ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಾವು ಶಾಸಕರಾಗಿ ಏನೂ ಪ್ರಯೋಜನ, ನಮ್ಮ ಕೆಲಸ ಕಾರ್ಯಗಳು ಯಾವುದು ಆಗುತ್ತಿಲ್ಲ. ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು. ಅಲ್ಲದೆ, ಈ ಬಗ್ಗೆ ಕಾರ್ಯತಂತ್ರ ರೂಪಿಸುವ ಕುರಿತು ಸಮಾಲೋಚನೆ ನಡೆಸಿದರು ಎಂದು ಗೊತ್ತಾಗಿದೆ.
ಆದರೆ ಈ ವಿಷಯ ಬಹಿರಂಗವಾಗುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಯಾಗಿದ್ದು, ಅತೃಪ್ತ ಶಾಸಕರು ಯಾವುದೇ ಸದ್ದುಗದ್ದಲವಿಲ್ಲದೆ, ಆಪರೇಶನ್ ಮುಖ್ಯಮಂತ್ರಿ ಕಾರ್ಯಾಚರಣೆಗೆ ಇಳಿದಿದ್ದಾರೆಯೇ ಇಲ್ಲವೇ ಯಡಿಯೂರಪ್ಪಅವರನ್ನು ಹೆಣೆಯಲು ಈ ಸಭೆ ನಡೆಸಲಾಯಿತೆ ಎಂಬ ಗುಸುಗುಸು ಶುರುವಾಗಿದೆ.
ಯಡಿಯೂರಪ್ಪ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕಿ ಅವರ ಸ್ಥಾನಕ್ಕೆ ಬೇರೋಬ್ಬರನ್ನು ತಂದು ಕೂಡಿಸಲು ಬಿಜೆಪಿಯ ಕೆಲವರು ಯತ್ನಿಸುತ್ತಿದ್ದಾರೆಯೇ ಅದಕ್ಕೆ ಬಿಜೆಪಿ ಹೈಕಮಾಂಡ್ ಮನ್ನಣೆ ನೀಡುತ್ತಾ ಎಂಬಅನುಮಾನ ಬಲಗೊಳ್ಳುತ್ತಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತದೆ ಎಂಬುದು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.