ಧಾರವಾಡ prajakiran. com : ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರವಾಗಬೇಕಾದರೆ ದೇಶದ ಎಲ್ಲೆಡೆ ಖಾದಿಯ ರಾಷ್ಟ್ರಧ್ವಜವೇ ಹಾರಾಡು ವಂತಾಗಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹೇಳಿದರು.
ಅವರು ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ
ಖಾದಿ ಉಳಿಸಿ, ದೇಶ ಬೆಳೆಸಿ ಅಭಿಯಾನದ ಅಂಗವಾಗಿ
ಧಾರವಾಡದಿಂದ ಗರಗವರೆಗೆ ಬೃಹತ್ ಬೈಕ್ ರ್ಯಾಲಿ ಉದ್ದೇಶಿಸಿ ಮಾತನಾಡಿದರು.
ಇಂದು ದೇಶದ 75ನೇ ಸ್ವಾತಂತ್ರ್ಯ ಹೋರಾಟದ ಅಮೃತ ಮಹೋತ್ಸವ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಕಾರಣ ಕೇಂದ್ರ ಸರ್ಕಾರ ಧ್ವಜ ಸಂಹಿತೆ ಕಾಯ್ದೆಗೆ ತಿದ್ದುಪಡಿ ಮಾಡಿ ಸಿಂಥೆಟಿಕ್, ಪಾಲಿಸ್ಟರ್, ರೇಷ್ಮೆ ಉಣ್ಣೆ ಬಟ್ಟೆಯ ಧ್ವಜ ಬಳಕೆಗೆ ಅನುಮತಿ ನೀಡಿದೆ.
ಇದನ್ನು ಕೂಡಲೇ ಕೈ ಬಿಟ್ಟು ಈ ಹಿಂದಿನಂತೆಯೇ ಕೇವಲ ಖಾದಿ ಬಟ್ಟೆಯ ರಾಷ್ಟ್ರ ಧ್ವಜವನ್ನು ಹಾರಿಸಲು ಮುಂದಿನ ವರ್ಷದಿಂದ ಅನುಮತಿ ನೀಡಬೇಕು.
ಆಮೂಲಕ ಆತ್ಮನಿರ್ಭರ ಭಾರತಕ್ಕೆ ಹೊಸ ಭಾಷ್ಯ ಬರೆಯಬೇಕು. ಧ್ವಜ ಸಂಹಿತೆ ಮೂಲ ಆಶಯಕ್ಕೆ ಧಕ್ಕೆ ತರಬಾರದು ಎಂದರು.
ದೇಶದ 10ಸಾವಿರ ಖಾದಿ ಉತ್ಪಾದನಾ ಕೇಂದ್ರಗಳ ಪುನರುಜ್ಜೀವನಕ್ಕೆ ಸಂಕಲ್ಪ ತೊಟ್ಟರೆ ದೇಶದ 10 ಲಕ್ಷ ಖಾದಿ ಉದ್ಯೋಗಿ ಗಳ ಜೀವನಕ್ಕೆ ಭದ್ರ ಬುನಾದಿ ಹಾಕಿದಂತಾಗಿ ಖಾದಿಯ ಗ್ರಾಮ ಸ್ವರಾಜ್ಯ ಕಲ್ಪನೆಗೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
ದೇಶದ ರಾಷ್ಟ್ರ ಧ್ವಜದ ಬಟ್ಟೆ ತಯಾರಿಸುವ ಏಕೈಕ ಕೇಂದ್ರ ನಮ್ಮ ಧಾರವಾಡ ಜಿಲ್ಲೆಯ ಗರಗದಲ್ಲಿರುವುದು ನಮಗೆ ಹೆಮ್ಮೆಯ ವಿಷಯ. ಅದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಪಡಿಸಲು
ಈ ಬಗ್ಗೆ ಬರುವ ದಿನಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ಹಾಗೂ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು ಅವರು ಸಕರಾತ್ಮವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದರು.
ಗರಗ ಖಾದಿ ಕ್ಷೇತ್ರಿಯ ಸೇವಾ ಸಂಘದ ಹಿರಿಯರಾದ
ಈಶ್ವರ ಇಟಗಿ ಮಾತನಾಡಿ, ನಮ್ಮ ಪೂರ್ವಜರು ರೂಪಿಸಿದ
ಧ್ವಜ ಸಂಹಿತೆ 2002ಅನ್ನು ಯಥಾವತ್ತಾಗಿ ಮುಂದುವರೆಸಬೇಕು.
ಇಲ್ಲದಿದ್ದರೆ ಖಾದಿಯ ಬದಲಿಗೆ ಬೇಕಾಬಿಟ್ಟಿಯಾಗಿ ತಯಾರಿಸಲಾದ ಹರಿದ ಧ್ವಜಗಳು, ಅಶೋಕ ಚಕ್ರ ಕೇವಲ ಒಂದೆ ಕಡೆ ಮುದ್ರಿಸಲಾದ ಧ್ವಜ ಹಾರಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಇಲ್ಲದಿದ್ದರೆ ಖಾದಿ ಗ್ರಾಮೋದ್ಯೋಗ ಕೇಂದ್ರ ಹಾಗೂ ಅದರ ಅವಲಂಬಿತರಿಗೆ ಉಳಿಗಾಲವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಜನಜಾಗೃತಿ ಸಂಘ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿ, ಖಾದಿ ಉದ್ಯಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಸಾಗಿದೆ.
ಈಗಾಗಲೇ ಅನೇಕ ಖಾದಿ ಉತ್ಪಾದನಾ ಕೇಂದ್ರ ಮುಚ್ಚಿವೆ. ಅನೇಕ ಕೆಲಸಗಾರರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅವರಿಗೆ ಧೈರ್ಯ ತುಂಬಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ವಿಶ್ವಾಸ ಮೂಡಿಸುವ ಸದುದ್ದೇಶದಿಂದ ಖಾದಿ ಉಳಿಸಿ, ದೇಶ ಬೆಳೆಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ದೇಶದ ಏಕೈಕ
ರಾಷ್ಟ್ರ ಧ್ವಜ ತಯಾರಿಕೆ ಕೇಂದ್ರ ವಾದ ಗರಗದಿಂದಲೇ ದೇಶದ ಗಮನ ಸೆಳೆಯುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು
ಇದಕ್ಕೂ ಮುನ್ನ ಕಲ್ಯಾಣ ನಗರದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇರುವ ಮಹಾತ್ಮ ಗಾಂಧಿ ಪುತ್ಥಳಿ ವರೆಗೆ ಪಾದಯಾತ್ರೆ ಮಾಡಲಾಯಿತು.
ಆನಂತರ ಧಾರವಾಡದಿಂದ ಗರಗವರೆಗೆ ಬೈಕ್ವರ್ಯಾಲಿ ನಡೆಸಲಾಯಿತು. ಈ ರ್ಯಾಲಿಯಲ್ಲಿ ನೂರಾರು ಯುವಕರು, ಮಕ್ಕಳು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡು ದೇಶಪ್ರೇಮ ಮೆರೆದರು.
ಈ ಸಂದರ್ಭದಲ್ಲಿ ಗರಗ ಖಾದಿ ಗ್ರಾಮೋದ್ಯೋಗ ಕೇಂದ್ರ ಕಾರ್ಯದರ್ಶಿ ಎಂ.ಎಸ್. ಹಿರೇಮಠ, ಬಸವರಾಜ ಕುಮಾರಸ್ವಾಮಿಮಠ,
ಜನಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ರವಿಶಂಕರ್ ಮಾಲಿ ಪಾಟೀಲ, ವಿರೂಪಾಕ್ಷಿ ಶಿರಾಳಶೆಟ್ಟಿ, ಮಹೇಶ ಪಾಟೀಲ, ಆನಂದ ಪಾಟೀಲ, ಕುಮಾರ ಅಗಸಿಮನಿ, ಈರಣ್ಣ ಹೂಗಾರ, ಮಂಜುನಾಥ ಹಿರೇಮಠ, ಬಸವರಾಜ ಧಾರವಾಡ , ನವೀನ್ ಪ್ಯಾಟಿ, ತೋಸಿಫ್ ಹಾಲಬಾವಿ,
ಸಲ್ಮಾನ್ ಶೇಕ್, ಬಸವರಾಜ ಕೊತದೊಡ್ಡಿ, ವೇಣು ಜಿರಾಕ್ಸ್, ಪವನ ಚೌಗಲೆ, ಮಹಾದೇವ, ಪ್ರಮೋದ, ನಿರಂಜನ, ಲಾಲ್ ಸಾಬ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.