ಧಾರವಾಡ prajakiran.com : ಮೂರು ಕೃಷಿ ಕಾಯ್ದೆಗಳು, ವಿದ್ಯುತ್ ಮಸೂದೆ ರದ್ದತಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ, ಅಡುಗೆ ಅನಿಲ, ತೈಲ ದರ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೆ.೨೭ ರಂದು ಕರೆ ನೀಡಿರುವ ಭಾರಯ ಬಂದ್ ಗೆ ಬೆಂಬಲಿಸಿ ಧಾರವಾಡ ಬಂದ್ ಅನ್ನು ಯಶಸ್ವಿಗೊಳಿಸಬೇಕು ಎಂದು ಸಂಯುಕ್ತ ಹೋರಾಟ-ಕರ್ನಾಟಕ ಮುಖಂಡರಾದ ಲಕ್ಷ್ಮಣ ಬಕ್ಕಾಯಿ ಹಾಗೂ ಸಾಮಾಜಿಕ ಹೋರಾಟಗಾರ ಡಾ. ವೆಂಕನನಗೌಡ ಪಾಟೀಲ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಘೋಷಣೆ ಮಾಡಿದ ಒಂದು ವರ್ಷ ಹಾಗು ದೆಹಲಿಯಲ್ಲಿನ ರೈತ ಹೋರಾಟಕ್ಕೆ ಹತ್ತು ತಿಂಗಳು ಪೂರ್ಣಗೊಳ್ಳುತ್ತಿದೆ.
ಐದು ನೂರಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿರುವ ಏಕ್ತಾ ಕಿಸಾನ್ ಮೊರ್ಚಾ ಭಾರತ್ ಬಂದ್ಗೆ ಕರೆ ನೀಡಿದೆ.
ಈ ಹಿನ್ನಲೆಯಲ್ಲಿ ಧಾರವಾಡ ಬಂದ್ ಸಂಘಟಿಸಲಾಗುತ್ತಿದೆ. ಜಿಲ್ಲೆಯ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿಗಳು,ಯುವಜನ ಮಹಿಳೆಯರು, ಕನ್ನಡ ಪರ ಸಂಘಟನೆಗಳು, ವರ್ತಕರು ಸೇರಿದಂತೆ ಎಲ್ಲ ವರ್ಗದ ಜನರು ಬಂದ್ ಬೆಂಬಲಿ ಯಸಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಬಂದ್ಗೆ ಸಿಎಫ್ಡಿಯ ಅಖಿಲ ಭಾರತ ಅಧ್ಯಕ್ಷ ಎಸ್.ಆರ್.ಹಿರೇಮಠ ರೈತ ಸೇನಾ ಕರ್ನಾಟಕದ ರಾಜ್ಯ ಅಧ್ಯಕ್ಷ ಎಸ್.ಆರ್.ಅಂಬಲಿ, ಬಿ.ಎಮ್.ಹನಸಿ ಕರ್ನಾಟಕ ಪಕ್ಷಾತೀತ ಹೋರಾಟ ಸಮಿತಿಯ ಬಿ.ಎಸ್.ಸೊಪ್ಪಿನ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ಮೇಶ ಲಿಗಾಡೆ, ರೈತ ಕೃಷಿ ಕಾರ್ಮಿಕ ಸಂಘಟನೆಯ ( ಆರ್ಕೆಎಸ್ ) ಜಿಲ್ಲಾಧ್ಯಕ್ಷ ಲಕ್ಷಣ ಜಡಗಣ್ಣವರ , ಈರಣ್ಣ ಬಳಿಗಾರ, ಶ್ರೀ ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಲೀಡ್ಕರ್ ಸಂಘದ ಅಧ್ಯಕ್ಷ ಅಶೋಕ ಬಂಡಾರಿ , ದಸಂಸ ಲಕ್ಷಣ ದೊಡ್ಡಮನಿ ಸೇರಿದಂತೆ ಅನೇಕರು ಬೆಂಬಲ ನೀಡಿದ್ದು ಅಲ್ಲದೇ ಬಂದ್ನಲ್ಲಿ ಭಾಗವಹಿಸುವರು ಎಂದರು.