ಧಾರವಾಡ prajakiran.com : ಪಿಎಸ್ಐ ನೇಮಕಾತಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮ ನೇಮಕಾತಿ ವಿರೋಧಿಸಿ ನೂರಾರು ವಿದ್ಯಾರ್ಥಿಗಳು ಧಾರವಾಡದ ಶ್ರೀನಗರ ವೃತ್ತದಿಂದ – ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ತಿರಂಗಾ ಯಾತ್ರೆ ನಡೆಸಿ ಪ್ರತಿಭಟನೆಯ ಕಿಚ್ಚು ಪ್ರದರ್ಶನ ಮಾಡಿದರು.
ದಾರಿಯುದ್ದಕ್ಕೂ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಕಿವಿಗೊಡದ ಭ್ರಷ್ಟ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಿರಂಗಾ ಯಾತ್ರೆ ಮುಗಿಸಿಕೊಂಡು ಬಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ 24 ಘಂಟೆಗಳ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಮುಖ್ಯಮಂತ್ರಿಗಳು ಬಂದು ಆಶ್ವಾಸನೆ ಕೊಡುವವರೆಗೆ ಇಲ್ಲಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಸಾಗರದಂತೆ ಸೇರಿದ ವಿದ್ಯಾರ್ಥಿಗಳಿಗೆ ಮಾತು ನೀಡಿದ ಆಮ್ ಆದ್ಮಿ ಪಕ್ಷ ವಿದ್ಯಾರ್ಥಿಗಳ ಬೇಡಿಕೆಗಳನ್ನು ಪೂರ್ತಿ ಮಾಡುವವರೆಗೆ ಈ ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ತಮ್ಮ ನಿರ್ಧಾರ ತಿಳಿಸಿದರು.
ವಿದ್ಯಾರ್ಥಿಗಳ ಮೊದಲ ಬೇಡಿಕೆ
ಪಿಎಸ್ಐ ಪರೀಕ್ಷೆ/ನೇಮಕಾತಿಯ ಬಗ್ಗೆ ಮುಕ್ತ ತನಿಖೆ ಆಗಬೇಕು ತಪ್ಪಿತಸ್ಥರನ್ನು ವಜಾಗೊಳಿಸಿ ಮರು ಪರೀಕ್ಷೆ ಆಗಬೇಕು
ಹಾಗೂ ಮುಂಬರುವ ಪರೀಕ್ಷೆಗಳಲ್ಲಿ ಪರೀಕ್ಷಾ ಪದ್ಧತಿ ವರ್ಷದ ಆರಂಭದಲ್ಲಿಯೆ ಪರೀಕ್ಷೆಗಳ ಅಧಿಸೂಚನೆ ಹೊರಡಿಸಿ ಅದರಲ್ಲಿ ದಿನಾಂಕಗಳನ್ನು ತಪ್ಪದೆ ಪಾಲಿಸುವುದು ಮತ್ತು ಇದನ್ನು ಸುಖ ಸುಮ್ಮನೆ ಯಾವುದೇ ಕಾರಣಕ್ಕೂ ಬದಲಾಯಿಸಬಾರದು.
ಒಂದು ವಿದ್ಯಾರ್ಥಿ ಒಂದೇ ಅರ್ಜಿ ಸಲ್ಲಿಸುವ ಹಾಗೆ ಒಂದೇ ಗುರುತಿನ ಚೀಟಿಯನ್ನು ಪರಿಗಣಿಸುವದು. ಉದಾಹರಣೆಗಾಗಿ ಎಸ್ ಎಸ್ ಎಲ್ ಸಿ ಅಂಕ ಪಟ್ಟಿ ನೋಂದಣಿ ಸಂಖ್ಯೆ.
ಎಲ್ಲವೂ ಡಿಜಿಟಲ್ ಆಗುತ್ತಿದ್ದಾಗ ಪರೀಕ್ಷೆಗಳನ್ನು ಸಹಿತ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಬೇಕು.
ಪರೀಕ್ಷಾ ಕೇಂದ್ರಗಳ ಪ್ರವೇಶದಲ್ಲಿ ಅತ್ಯಾಧುನಿಕ ರೀತಿಯ ಮೆಟಲ್ ಡಿಟೆಕ್ಟರ್ / ಎಲೆಕ್ಟ್ರಾನಿಕ್ ಸಾಧನ ಡಿಟೆಕ್ಟರ್ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ನೆಟ್ವರ್ಕ್ ಜಾಮ್ಮರ್ ಅಳವಡಿಸುವುದು.
ಪರೀಕ್ಷೆ ಅಧಿಸೂಚನೆಯಲ್ಲಿಯೆ ಉತ್ತರ ಪಟ್ಟಿಯನ್ನು ಬಿಡುಗಡೆ ಮಾಡುವ ದಿನಾಂಕವನ್ನು ಕೊಟ್ಟು ಪರೀಕ್ಷೆ ಮುಗಿದ ಒಂದು ವಾರದಲ್ಲಿಯೇ ತಜ್ಞರ ಸಹಾಯದಿಂದ ಉತ್ತರ ಪಟ್ಟಿ ಬಿಡುಗಡೆ ಮಾಡಿ ಅತಿ ಕಡಿಮೆ ಬದಲಾವಣೆ ಆಗುವ ಹಾಗೆ (1-2 ಅಂಕ) ನೋಡಿಕೊಳ್ಳುವುದು.
ಎಲ್ಲ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ತಿಳಿದುಕೊಳ್ಳುವ ಹಾಗೆ ವ್ಯವಸ್ಥೆ ಮಾಡುವದು.
ಈ ಸಂದರ್ಭದಲ್ಲಿ ಸಾಗರದಂತೆ ನೆರೆದ ವಿದ್ಯಾರ್ಥಿಗಳ ಜೊತೆಗೆ ಆಮ್ ಆದ್ಮಿ ಪಕ್ಷದ ಮುಖಂಡರಾದ ಬಸವರಾಜ ಮುಡಿಗೌಡರ, ಅನಂತಕುಮಾರ ಬುಗಡಿ, ಪ್ರವೀಣ ನಡಕಟ್ಟನ, ಶಶಿಕುಮಾರ ಸುಳ್ಳದ, ಅಲಾಗೊಂದ ಬಿರಾದಾರ, ಎಜಾಜ್ ಶೇಖ, ಸಂತೋಷ ಮಾನೆ, ಮಲ್ಲಿಕಾರ್ಜುನಯ್ಯ ಹಿರೇಮಠ, ಮಲ್ಲಪ್ಪ ತಡಸದ, ಬಾಷಾ ತಳೇವಾಡ, ಬಾಬುಸಾಬ್ ಶೇಖ ಮತ್ತಿತರರು ಪಾಲ್ಗೊಂಡಿದ್ದರು.