ಧಾರವಾಡ prajakiran.com : ಕಳೆದ ನಾಲ್ಕು ದಿನಗಳ ಹಿಂದಷ್ಟೇ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.
ಆದರೆ ಅರಣ್ಯ ಅಧಿಕಾರಿಗಳಿಗೆ ಚಿರತೆಯ ಯಾವ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ಚಿರತೆ ಕಾರ್ಯಾಚರಣೆ ಸ್ಥಗಿತ ಗೊಳಿಸಿದ್ದರು.
ಆದರೆ ಮತ್ತೆ ಸಂಜೆ ವೇಳೆ ಚಿರತೆಯು ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಹೆಚ್ಚಿನ ಆತಂಕ ಹೆಚ್ಚಿಸಿದೆ.
ನಿನ್ನೆ ರಾತ್ರಿ ಕವಲಗೇರಿ ಗ್ರಾಮದ ಹೊರವಲಯದ ಹೊಲ ಒಂದರಲ್ಲಿ ಚಿರತೆಯು ಪ್ರತ್ಯಕ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಚಿರತೆ ನೋಡಿದ ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಿಯರ ಮಾಹಿತಿ ಮೇರೆಗೆ ತಕ್ಷಣವೇ ಕಬ್ಬಿನ ಹೊಲದ ಬಳಿ ಬಂದ ವಲಯ ಅರಣ್ಯ ಇಲಾಖೆಯ ಅಧಿಕಾರಿ ಆರ್ ಎಸ್ ಉಪ್ಪಾರ ನೇತೃತ್ವದ ತಂಡ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.
ಇನ್ನೂ ಚಿರತೆಯು ಶಿವಾನಂದ ಮಾಳಶೆಟ್ಟಿಯವರ ಸುಮಾರು ಮೂವತೈದು ಎಕರೆ ಕಬ್ಬಿನ ಜಮೀನಿನಲ್ಲಿ ಓಡಾಟ ನಡೆಸಿದ್ದು, ಹೆಜ್ಜೆ ಗುರುತುಗಳು ಸಹ ಪತ್ತೆಯಾಗಿವೆ.
ಚಿರತೆ ಕಬ್ಬಿನ ಹೊಲದಲ್ಲೇ ಬೀಡು ಬಿಟ್ಟಿದ್ದು, ಡ್ರೋನ್ ಮೂಲಕ ಚಿರತೆ ಚಲನವಲನಗಳ ಕುರಿತು ಶೋಧ ನಡೆಸಲಾಗುತ್ತಿದೆ.
ಅಷ್ಟೇ ಅಲ್ಲದೇ ಸುಮಾರು ಐವತ್ತಕ್ಕೂ ಹೆಚ್ಚು ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ ಚಿರತೆ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದೆ ವೇಳೆ ಅರಣ್ಯ ಇಲಾಖೆ ಅಧಿಕಾರಿ ಯಶಪಾಲ ಕ್ಷಿರಸಾಗರ ಮಾತನಾಡಿ, ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಗ್ರಾಮಸ್ಥರು ಒಬ್ಬಂಟಿಯಾಗಿ ಓಡಾಟ ಮಾಡಬಾರದು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಇನ್ನೂ ಈ ಕುರಿತು ಮಾತನಾಡಿದ ಚಿರತೆಯ ಪ್ರತ್ಯಕ್ಷದರ್ಶಿಯವರು ಆದಷ್ಟು ಬೇಗ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿದು, ನಮ್ಮ ಬೆಳೆಗಳನ್ನು ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.