ಒಂದು ಕೋಟಿಗೂ ಅಧಿಕ ಹಣ ಸರ್ಕಾರಕ್ಕೆ ಮರುಜಮೆ ಮಾಡಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ
ಧಾರವಾಡ prajakiran.com : ಸಾಮಾಜಿಕ ಭದ್ರತಾ ಯೋಜನೆಯಡಿ ಹಿರಿಯ ನಾಗರಿಕರಿಗೆ ನೀಡುವ ಮಾಸಿಕ ಪಿಂಚಣಿ ಸರಿಯಾಗಿ ಮತ್ತು ಅರ್ಹರಿಗೆ ತಲುಪುತ್ತಿರುವ ಕುರಿತು ವಿಶೇಷ ಕ್ರಮಗಳನ್ನು ಜಿಲ್ಲಾಡಳಿತದಿಂದ ವಹಿಸಲಾಗಿದೆ. ಮರಣ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿ ಪಿಂಚಣಿ ಪಡೆಯುತ್ತಿದ್ದ 7,973 ಪ್ರಕರಣಗಳನ್ನು ಪತ್ತೆ ಮಾಡಿ ಸುಮಾರು 1 ಕೋಟಿಗೂ ಅಧಿಕ ರೂ.ಗಳನ್ನು ಸರ್ಕಾರಕ್ಕೆ ಮರಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, 2015 ನೇ ಸಾಲಿನಿಂದ 2021 ಫೆ.16 ರ ವರೆಗೆ ಜಿಲ್ಲೆಯಲ್ಲಿ ಒಟ್ಟು 35,166 ಮರಣ ಹೊಂದಿದ ವ್ಯಕ್ತಿಗಳ ಮಾಹಿತಿಯನ್ನು ಇ-ಜನ್ಮ ತಂತ್ರಾಶದಿಂದ ಪಡೆಯಲಾಗಿದೆ.
ಮರಣ ಹೊಂದಿದ ವ್ಯಕ್ತಿಗಳ ಹೆಸರಿನೊಂದಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಹೆಸರುಗಳನ್ನು ಪರಿಶೀಲಿಸಿ ಇಲ್ಲಿಯವರೆಗೆ ಒಟ್ಟು 7,973 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಹೇಳಿದರು.
ಮರಣ ಹೊಂದಿರುವ 7,973 ಫಲಾನುಭವಿಗಳ ಬ್ಯಾಂಕ್ ಖಾತೆಯಲ್ಲಿದ್ದ ಒಟ್ಟು 1,65,12,032 ರೂ.ಗಳನ್ನು ಸರ್ಕಾರಕ್ಕೆ ಮರುಸಂದಾಯ ಮಾಡಲಾಗಿದೆ.
ಮತ್ತು ಇನ್ನೂ ವಿವಿಧ ತಾಲೂಕುಗಳಲ್ಲಿ ಬಾಕಿ ಇರುವ 27,193 ಮರಣ ಹೊಂದಿದ ವ್ಯಕ್ತಿಗಳ ದಾಖಲೆಗಳನ್ನು ಪರಿಶೀಲಿಸಿ ಅದರಲ್ಲಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಹೆಸರು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.