ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮ : ಗುರುನಾಥ ಗೌಡ ಗೌಡರ
ಧಾರವಾಡ prajakiran. com : ಧಾರವಾಡದ ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ತಾಲೂಕಿನ ಗೋವನಕೊಪ್ಪ, ಗೋಂಗಡಿಕೊಪ್ಪ ಹಾಗೂ ಸೋಮಾಪುರ ಗ್ರಾಮದ 500ಕ್ಕೂ ಅಧಿಕ ಮಕ್ಕಳಿಗೆ ಸೋಮವಾರ ನೋಟ್ ಬುಕ್ ವಿತರಣೆ ಮಾಡಲಾಯಿತು.
ಸೋಮವಾರ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆಯ ನೂರಾರು ಮಕ್ಕಳಿಗೆ ನೋಟ್ ಬುಕ್ ವಿತರಿಸಿದ ಬಳಿಕ ಮಾತನಾಡಿದ ಗ್ರಾಮದ ಹಿರಿಯ ಮುಖಂಡರಾದ ಗುರುನಾಥ ಗೌಡ ಗೌಡರ, ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿದೆ.
ಬಸವರಾಜ ಕೊರವರ ಅವರು ಧಾರವಾಡ ತಾಲೂಕಿನ ನೂರಾರು ಸರಕಾರಿ ಶಾಲೆಯ 35 ಸಾವಿರ ಮಕ್ಕಳಿಗೆ ನೋಟ್ ಬುಕ್ ವಿತರಿಸಲು ಮುಂದಾಗಿರುವುದು ಅವರ ಸಾಮಾಜಿಕ ಬದ್ದತೆಗೆ ಕೈಗನ್ನಡಿಯಾಗಿದೆ ಎಂದರು.
ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ, ಸರಕಾರ ಸಕಾಲಕ್ಕೆ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಅಗತ್ಯವಾದ ಸೌಕರ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಮಕ್ಕಳ ಹಕ್ಕುಗಳ ಹೋರಾಟಗಾರರು ಆಗಿರುವ ಜನ ಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿ, ಸರಕಾರಿ ಶಾಲೆಗಳ ಸಂಖ್ಯೆ ಕಳೆದ ಹಲವಾರು ವರ್ಷಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆ ಆಗಿವೆ.
ಮಕ್ಕಳ ಸಂಖ್ಯೆ ಕೂಡ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪೋಷಕರು ಸರ್ಕಾರದ ಶಾಲೆಗಳ ಕಡೆ ಹೆಚ್ಚಿನ ಗಮನ ಹರಿಸಬೇಕು ಆ ಮೂಲಕ ಅಲ್ಲಿ ದೊರೆಯುವ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಸದೃಢವಾದ ಹಳ್ಳಿ, ಸುಂದರ ಹಾಗೂ ಸಮರ್ಥ ಭಾರತ ಕಟ್ಟಬಹುದಾಗಿದೆ.
ಸಮಾಜದ ಕಟ್ಟ ಕಡೆಯ ಮಕ್ಕಳು ಕೂಡ ಶಿಕ್ಷಣ ದಿಂದ ವಂಚಿತರಾಗಬಾರದು ಎಂಬ ಸದಾಶಯದೊಂದಿಗೆ ಸರಕಾರಿ ಶಾಲೆಯಲ್ಲಿ ಎಲ್ಲಾ ಮಕ್ಕಳು ಇರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಇಂದಿನ ಮಕ್ಕಳು ಇಂದಿನ ಪ್ರಜೆಗಳು.
ಸರಕಾರಿ ಶಾಲೆ ಉಳಿಸಿ ಬೆಳಸಲು ಎಲ್ಲರೂ ಪಣ ತೊಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜನಜಾಗೃತಿ ಸಂಘದ ಸುಮಾ ಬಸವರಾಜ ಕೊರವರ, ರಾಘವೇಂದ್ರ ಶೆಟ್ಟಿ, ಆನಂದ ಪಾಟೀಲ, ಕುಮಾರ್ ಅಗಸಿಮನಿ, ಮಲ್ಲೇಶ ಅಂಬಿಗೇರ, ಈರಣ್ಣ ಹೂಗಾರ, ನವೀನ ಪ್ಯಾಟಿ ಸೇರಿದಂತೆ ಗೋವನಕೊಪ್ಪ, ಗೋಂಗಡಿಕೊಪ್ಪ ಹಾಗೂ ಸೋಮಾಪುರ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.