ಬೆಂಗಳೂರು prajakiran.com : ರಾಜ್ಯದಲ್ಲಿ ಮಂಗಳವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ ಹೊಸದಾಗಿ 161 ಜನರಿಗೆ ಸೋಂಕು ತಗುಲಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5921ಕ್ಕೆ ಏರಿಕೆ ಕಂಡಿದೆ.
ರಾಜ್ಯದ 161 ಸೋಂಕಿತರಲ್ಲಿ, 91 ಜನ ಹೊರರಾಜ್ಯದಿಂದಲೇ ಬಂದವರಿಗೆ ಆಗಿದ್ದರೆ, ಅಂತರ್ ರಾಷ್ಟ್ರೀಯ ಪ್ರಯಾಣಿಕರು 24 ಜನರಿದ್ದಾರೆ.
ಇಂದು 164 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 2605 ಜನ ಗುಣಮುಖರಾಗಿದ್ದು, 3248 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಜನ ಐಸಿಯುನಲ್ಲಿದ್ದಾರೆ.
ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಇಬ್ಬರು ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 66ಕ್ಕೆ ಬಂದು ನಿಂತಿದೆ.
ಮಂಗಳವಾರ ಪತ್ತೆಯಾದ 161 ಪ್ರಕರಣಗಳಲ್ಲಿ ಯಾದಗಿರಿ, ಬೆಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.
ಅದರಲ್ಲೂ ವಿಶೇಷವಾಗಿ ಬಿಸಲನಾಡು ಯಾದಗಿರಿಯಲ್ಲಿ 61, ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿ29, ದಕ್ಷಿಣ ಕನ್ನಡದಲ್ಲಿ 23 ಪ್ರಕರಣಗಳು ಕಂಡು ಬಂದಿವೆ.
ಇನ್ನೂಳಿದಂತೆ ಕಲಬುರಗಿಯಲ್ಲಿ10, ಬೀದರ್ ನಲ್ಲಿ 9, ದಾವಣಗೆರೆಯಲ್ಲಿ 8, ಕೊಪ್ಪಳದಲ್ಲಿ 6, ಶಿವಮೊಗ್ಗ 4, ವಿಜಯಪುರ 2, ಚಿಕ್ಕಬಳ್ಳಾಪುರ 2, ಮೈಸೂರು 2, ಧಾರವಾಡ 2, ಬಾಗಲಕೊಟೆ, ತುಮಕೂರ ಹಾಗೂ ಚಾಮರಾಜನಗರದಲ್ಲಿ ತಲಾ ಒಂದುಸೋಂಕು ಅಂಟಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಮುಂದುವರೆದಿದ್ದು, ದೇಶದಲ್ಲಿ ಮೊದಲ ಬಲಿ ಪಡೆದ ಕಲಬುರಗಿಯಲ್ಲಿ ಮಂಗಳವಾರ ಪಿ-5900 ನೇ ಸೋಂಕಿತೆ 17 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಕಲಬುರಗಿ ಜಿಲ್ಲೆಯ ನಿವಾಸಿಯಾಗಿದ್ದು, ಉಸಿರಾಟದ ತೊಂದರೆ, ತಲೆ ನೋವಿನಿಂದ ಬಳಲುತ್ತಿದ್ದ ಹಾಗೂ ನರ ಸಂಬಂಧಿ ಕಾಯಿಲೆಯಿಂದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮರಣವನ್ನಪ್ಪಿದ್ದಾರೆ. ಆ ಮೂಲಕ ಕಲಬುರಗಿಯಲ್ಲಿ ಈವರೆಗೆ 8 ಜನ ಮೃತಪಟ್ಟದಂತಾಗಿದೆ.
ಇನ್ನೂ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಪಿ-4316 ನೇ ಸೋಂಕಿತೆ 65 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.ಅವರು ರಕ್ತದೊತ್ತಡ, ಕಿಡ್ನಿ ತೊಂದರೆ, ಮಧುಮೇಹ ದಿಂದ ಬಳಲುತ್ತಿದ್ದರು.
ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಲಿಯಾಗಿದ್ದಾರೆ. ಆ ಮೂಲಕ ಬೆಂಗಳೂರು ನಗರ ಜಿಲ್ಲೆಯಲ್ಲಿ ಈವರೆಗೆ 19 ಜನ ಸಾವನ್ನಪ್ಪಿದಂತಾಗಿದೆ.