ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಮರಣ ಮೃದಂಗ ಮುಂದುವರೆದಿದ್ದು, ಭಾನುವಾರ ವಿಲ್ಸನ್ ಗಾರ್ಡನ್ ಟ್ರಾಫೀಕ್ ಎಎಸ್ ಐ ಸಾವನ್ನಪ್ಪಿದ್ದಾರೆ.
ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆಯೇ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.
ಈವರೆಗೆ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿಯೇ ಈವರೆಗೆ ಮೂವರು ಪೊಲೀಸರು ಸಾವನ್ನಪ್ಪಿದ್ದಾರೆ. ಇಬ್ಬರು ಮಾತ್ರ ಗುಣಮುಖರಾಗಿದ್ದಾರೆ.
ಸೋಂಕು ತಗುಲಿರುವ ಇಬ್ಬರು ಪೊಲೀಸರಿಗೆ ನಿನ್ನೆ ಸಂಜೆಯಿಂದ ಇವತ್ತು ಮಧ್ಯಾಹ್ನದವರೆಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಅಂಬುಲೆನ್ಸ್ ಗಾಗಿ ಕಾಯ್ದ ಘಟನೆ ವರದಿಯಾಗಿದೆ.
ಕರೋನಾ ಸೇನಾನಿಗಳಿಗೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ಪೊಲೀಸ್ ಇಲಾಖೆಗೆ ಹಾಗೂ ಅವರ ಕುಟುಂಬದವರಿಗೆ ಸಂಕಷ್ಟ ಹಾಗೂ ಆತಂಕ ತಂದಿದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆ ಹೆಡ್ ಕಾನ್ಸಟೇಬಲ್ ಹಾಗೂ ಇನ್ನೊಬ್ಬ ಸಿಬ್ಬಂದಿಗೆ ಕರೋನಾ ಸೋಂಕು ಇರುವುದು ದೃಢಪಟ್ಟರು ಬೆಡ್ ಇಲ್ಲ ಮನೆಯಲ್ಲಿಯೇ ಇರಿ ಎಂದು ಆಸ್ಪತ್ರೆ ಹೇಳಿದೆ.
18 ಗಂಟೆಗಳ ಕಾಲ ಬೆಡ್ ಗಾಗಿ ಬೆಂಗಳೂರಿನ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆ ಹೆಡ್ ಕಾನ್ಸಟೇಬಲ್ ಹಾಗೂ ಇನ್ನೊಬ್ಬ ಸಿಬ್ಬಂದಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೊನೆಗೂ ಅವರಿಬ್ಬರನ್ನು ಬೆಂಗಳೂರಿನ ಸಿ.ವಿ ರಾಮನ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.