ಧಾರವಾಡ prajakiran.com : ಶಿಕ್ಷಣ ಕ್ಷೇತ್ರದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಶಿಕ್ಷಣ ಸಚಿವ ಹಾಗೂ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಶಾಲಾ-ಕಾಲೇಜುಗಳ ನೂರಾರು ಶಿಕ್ಷಕರು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಶಿಕ್ಷಕರು, ಅನುದಾನ ರಹಿತ ಶಾಲಾ-ಕಾಲೇಜುಗಳ ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಹಲವು ಭಾರಿ ಒತ್ತಾಯಿಸಿದರೂ, ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.
1995ರ ನಂತರ ಆರಂಭವಾದ ಕನ್ನಡ ಮಾಧ್ಯಮದ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ಜ್ಯೋತಿ ಸಂಜೀವಿನಿ ಯೋಜನೆ ಅನುದಾನ ರಹಿತ ಶಿಕ್ಷಕರಿಗೂ ವಿಸ್ತರಿಸಲು, ಹೊರಟ್ಟಿ ನೇತೃತ್ವದ ಕಾಲ್ಪನಿಕ ವೇತನ ಸಮಿತಿ ವರದಿ ಜಾರಿ ಮಾಡುವಂತೆ ಆಗ್ರಹಿಸಿದರು.
ಉಪವಾಸ ಧರಣಿಗೆ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳು, ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ, ಮಣಕವಾಡದ ಸ್ವಾಮೀಜಿ, ಜಿ.ಆರ್.ಭಟ್, ಶಾಮ ಮಲ್ಲನಗೌಡರ, ಎಸ್.ಎಂ.ಅಂಗಡಿ, ಎ.ಎಸ್.ಪಾಟೀಲ, ಕೆ.ಜಿ.ಭಜಂತ್ರಿ, ಎಂ.ಕೆ.ಲಮಾಣಿ, ಎಸ್.ಕೆ.ಶೆಲ್ಲಿಕೇರಿ, ಬಿ.ಎಂ.ಮಳಗಿ, ಎನ್.ವೈ.ನಾಯಕ ಬೆಂಬಲ ಸೂಚಿಸಿದರು.