ಧಾರವಾಡ prajakiran.com : ಧಾರವಾಡದಿಂದ ಸವದತ್ತಿ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯ ಎಡ ಬದಿಯಲ್ಲಿ ತೀವ್ರ ಮಣ್ಣು ಕೊರೆತ ಉಂಟಾಗಿದ್ದು, ಯಾವುದೇ ಸಂದರ್ಭದಲ್ಲಿ ವಾಹನಗಳ ಅಪಘಾತ ಸಂಭವಿಸುವ ಅಪಾಯ ಕಾದಿದೆ.
ಈ ರಾಜ್ಯ ಹೆದ್ದಾರಿ ಮಧ್ಯ ಧಾರವಾಡದಿಂದ ಸುಮಾರು ೬ ಕಿ.ಮೀ. ಅಂತರದಲ್ಲಿರುವ ಗುತ್ತೆಪ್ಪನವರ ಭಾವಿಯ ಸಮೀಪದಲ್ಲಿ ರಸ್ತೆಯ ಎಡಬದಿಯ ಮಣ್ಣು ಸಂಪೂರ್ಣ ಕುಸಿದಿದ್ದು ಮಳೆ ನೀರಿನ ಹೊಡೆತದಿಂದಾಗಿ ತೀವ್ರ ಮಣ್ಣು ಸವಕಳಿ ಉಂಟಾಗಿದೆ.
ಇಲ್ಲಿ ತಗ್ಗು ಪ್ರದೇಶವಿದ್ದು, ರಸ್ತೆ ಕೆಳಸ್ತರದ ಮಣ್ಣು ಮತ್ತಷ್ಟು ಕುಸಿದರೆ ವಾಹನಗಳು ನೆಲಕ್ಕುರುಳಿ ಅಪಘಾತ ಸಂಭವಿಸುವ ತೀವ್ರ ಅಪಾಯವಿದೆ.
ಧಾರವಾಡದಿಂದ ಸವದತ್ತಿ ಕಡೆಗೆ ಹೋಗುವ ವಾಹನ ಸವಾರರು ಎದುರಿನ ವಾಹನಗಳ ಸಂಚಾರಕ್ಕೆ ಅನುಗುಣವಾಗಿ ಸಂದರ್ಭೋಚಿತವಾಗಿ ತಮ್ಮ ವಾಹನಗಳನ್ನು ಎಡಕ್ಕೆ ತೆಗೆದುಕೊಂಡಾಗ ವಾಹನದ ಭಾರ ತಾಳದೇ ಈ ಪೊಳ್ಳಾದ ರಸ್ತೆ ಕುಸಿದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿಗೆ ಉರುಳಿ ಬೀಳಬಹುದಾಗಿದೆ.
ಜೊತೆಗೆ ಈ ರಸ್ತೆಯ ಎರಡೂ ಬದಿಗಳಲ್ಲಿ ರೈತರ ಹೊಲಗಳಿದ್ದು, ಚಕ್ಕಡಿ, ಟ್ರಾö್ಯಕ್ಟರ್ ಸೇರಿದಂತೆ ಇತರೇ ವಾಹನಗಳು ಅಪಘಾತಕ್ಕೆ ಸಿಲುಕಿ ಜನಜಾನುವಾರು ತಮ್ಮ ಪ್ರಾಣ ಕಳೆದುಕೊಳ್ಳುವ ಅಪಾಯವಿದೆ.
ತುರ್ತು ಕಾಮಗಾರಿ : ಪ್ರಸ್ತುತ ಈ ರಾಜ್ಯ ಹೆದ್ದಾರಿಯ ಅಪಾಯದ ಸ್ಥಳ ಪರಿಶೀಲನೆ ಮಾಡುವ ಮೂಲಕ ಇಲ್ಲಿ ರಸ್ತೆ ಸುರಕ್ಷತೆಗೆ ಪೂರಕವಾಗಿ ತುರ್ತು ಕಾಮಗಾರಿ ಕೈಕೊಳ್ಳುವ ಅಗತ್ಯವಿದೆ. ಸರಿಯಾದ ಪ್ರಮಾಣದಲ್ಲಿ ಕಲ್ಲಿನಿಂದ ಸುರಕ್ಷತಾ ಗೋಡೆ ನಿರ್ಮಾಣ ಮಾಡಿ ರಸ್ತೆಯ ಕೊರೆತವನ್ನು ಸಂಪೂರ್ಣ ತಡೆಗಟ್ಟಿದಲ್ಲಿ ಮಾತ್ರ ಇಲ್ಲಿಯ ವಾಹನ ಅಪಘಾತಗಳನ್ನೂ ತಡೆಯಬಹುದಾಗಿದೆ.
ರಾಜ್ಯ ಹೆದ್ದಾರಿಗಳ ಮೂಲಸೌಕರ್ಯ ವಿಕಾಸಕ್ಕೆಂದೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಷ್ಠಾನಗೊಳಿಸಿರುವ ರಾಜ್ಯ ಮತ್ತು ರಾಷ್ಟಿçÃಯ ಹೆದ್ದಾರಿ ನಿರ್ವಹಣಾ ಪ್ರಾಧಿಕಾರ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-೨೦೧೧ರ ಮೂಲಕ ಕಾಲಕಾಲಕ್ಕೆ ರಸ್ತೆ ನಿರ್ವಹಣೆಯನ್ನು ಕೈಕೊಳ್ಳಬೇಕಾಗುತ್ತದೆ.
ಇನ್ನು ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದ ಮಳೆಗಾಲವು ಆರಂಭಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ತೀವ್ರ ಗಮನ ನೀಡಿ ಆದಷ್ಟೂ ಶೀಘ್ರವಾಗಿ ಕುಸಿಯುತ್ತಿರುವ ರಾಜ್ಯ ಹೆದ್ದಾರಿಯನ್ನು ಪೂರಕ ಕಾಮಗಾರಿಯೊಂದಿಗೆ ರಕ್ಷಣೆ ಮಾಡಿ ಜೀವಹಾನಿ ತಡೆಗಟ್ಟಬೇಕೆಂದು ಗುರುಮೂರ್ತಿ ಯರಗಂಬಳಿಮಠ ಸಂಬಂಧಿಸಿದ ಅಧಿಕಾರಿಗಳಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.