ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆಯ ಉಸುಕಿನ ಅಡ್ಡಾ ಸುತ್ತಲಿನ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿ,ಸಿಬ್ಬಂದಿ ಬೀಡು
ಧಾರವಾಡ prajakiran.com ; ನಗರದಲ್ಲಿ ಭಾನುವಾರ ಬೆಳಿಗ್ಗೆ ಕಾಣಿಸಿಕೊಂಡಿರುವ ಒಂಟಿ ಸಲಗ(ಕಾಡಾನೆ) ಪತ್ತೆಯ ಕಾರ್ಯ ಸೋಮವಾರ ಕೂಡ ಮುಂದುವರೆಯಿತು.
ಕರ್ನಾಟಕ ವಿ.ವಿ.ಆವರಣದಿಂದ ಆನೆಯು ಹೊರಬಂದಿದ್ದು, ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ ಹಿಂಭಾಗದ ಉಸುಕಿನ ಅಡ್ಡಾ ಸುತ್ತಲಿನ ಪ್ರದೇಶಗಳಲ್ಲಿ ಇಂದು ಗೋಚರಿಸಿದೆ ,
ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಆನೆಯು ಹೆದ್ದಾರಿ ದಾಟಲು ಪ್ರಯತ್ನಿಸಿದೆ .ಜನರು,ವಾಹನ ಸಂಚಾರ ನೋಡಿ ಮರಳಿ ಬಂದಿದೆ.
ಗದಗ ಪ್ರಾಣಿ ಸಂಗ್ರಹಾಲಯ ಹಾಗೂ ಶಿವಮೊಗ್ಗದಿಂದ ತಜ್ಞವೈದ್ಯರು ಬರುತ್ತಿದ್ದಾರೆ.
ಅರವಳಿಕೆ ಮದ್ದು ನೀಡುವ ಗನ್ ಕೂಡ ತರಿಸಲಾಗುತ್ತಿದೆ.ಶಿವಮೊಗ್ಗದ ಸಕ್ರೆಬೈಲು ಆನೆಬಿಡಾರದಿಂದ ತರಬೇತಿ ಹೊಂದಿದ ಮೂರು ಆನೆಗಳು ಕೂಡ ಬರುತ್ತಿವೆ .
ಅವುಗಳ ನೆರವಿನಿಂದ ಕಾರ್ಯಾಚರಣೆ ಮುಂದುವರೆಯಲಿದೆ. ಪೊಲೀಸ್ ತರಬೇತಿ ಶಾಲೆ,ಕೇಂದ್ರೀಯ ವಿದ್ಯಾಲಯ,ಮೈಲಾರ ಲಿಂಗೇಶ್ವರ ನಗರ,ನುಗ್ಗಿಕೇರಿ ಮತ್ತಿತರ ಪ್ರದೇಶಗಳ ನಾಗರಿಕರು ಹೆಚ್ಚು ಎಚ್ಚರಿಕೆವಹಿಸಬೇಕು,
ನಾಗರಿಕರು ,ಗ್ರಾಮಸ್ಥರು ಅನಗತ್ಯವಾಗಿ ಒಂದೆಡೆ ಸೇರಿದರೆ ಕಾರ್ಯಾಚರಣೆಗೆ ತೊಂದರೆಯಾಗುತ್ತದೆ, ಜನರು ಅಡ್ಡಿ ಉಂಟು ಮಾಡಬಾರದು ಎಂದು ಅವರು ತಿಳಿಸಿದ್ದಾರೆ.