ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ ವಿರುದ್ದ ಪತ್ರ ಸಮರದ ಮೂಲಕ ಪೊಲೀಸ್ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ. ಕೃಷ್ಣಕಾಂತ ಅವರನ್ನು ರಾಜ್ಯ ಸರಕಾರ ಧಾರವಾಡ ಎಸ್ಪಿಯಾಗಿ ನೇಮಿಸಿ ಆದೇಶ ಹೊರಡಿಸಿತ್ತು.
ಅಲ್ಲದೆ, ಪೊಲೀಸ್ ಆಯುಕ್ತ ಆರ್. ದಿಲೀಪ ಅವರನ್ನು ಬೆಂಗಳೂರಿನ ಆರ್ಥಿಕ ಅಪರಾಧ ವಿಭಾಗದ ಡಿಐಜಿಯಾಗಿ ನೇಮಿಸಿದ್ದ ಬೆನ್ನಲ್ಲೇ ಧಾರವಾಡ ಎಸ್ಪಿ ಪಿ ಕೃಷ್ಣಕಾಂತ ಅವರಿಗೆ ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿಯೂ ಮುಂದುವರೆಯಲು ಹೆಚ್ಚುವರಿ ಹೊಣೆ ನೀಡಿ ಸರಕಾರ ಆದೇಶ ಹೊರಡಿಸಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಮನವಿ ಮೇರೆಗೆ ರಾಜ್ಯ ಸರಕಾರ ಈ ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಮೂಲಗಳು ಪ್ರಜಾಕಿರಣ.ಕಾಮ್ ಗೆ ಖಚಿತಪಡಿಸಿವೆ.
ಹುಬ್ಬಳ್ಳಿ-ಧಾರವಾಡ ಅಪರಾಧ ಹಾಗೂ ಸಂಚಾರ ಡಿಸಿಪಿ ವಿರುದ್ದ ಆರೋಪ ಮಾಡಿದ ಕುರಿತು ವಿವರಣೆ ನೀಡುವಂತೆ ಪೊಲೀಸ್ ಆಯುಕ್ತರು ಮೆಮೋ ನೀಡಿದ್ದರು.
ಅದರಿಂದ ಸಿಡಿಮಿಡಿಗೊಂಡ ಡಿಸಿಪಿ ಪೊಲೀಸ್ ಆಯುಕ್ತರ ವಿರುದ್ದ ಸೂಕ್ಷ್ಮ ಪ್ರಕರಣವೊಂದರ ತನಿಖೆಗೆ ಸಂಬಂಧಿಸಿದಂತೆ ಮಾತನಾಡಲು ಭೇಟಿಗೆ ಸಮಯಾವಕಾಶ ನೀಡುವಂತೆ ಪತ್ರ ಬರೆದಿದ್ದರು.
ಆ ಎರಡು ಪತ್ರಗಳು ಅವಳಿನಗರದ ಪೊಲೀಸ್ ಅಧಿಕಾರಿಗಳ ವಾಟ್ಸಅಪ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇದು ಪೊಲೀಸ್ ಮಹಾನಿರ್ದೇಶಕರ ಕಚೇರಿ ಮೆಟ್ಟಿಲು ಹತ್ತಿದ್ದರಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೆಂಗಣ್ಣಿಗೆ ಗುರಿಯಾಗಿ ಇಬ್ಬರ ವರ್ಗಾವಣೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿತ್ತು.
ಇದೀಗ ಧಾರವಾಡ ಎಸ್ಪಿ ಪಿ ಕೃಷ್ಣಕಾಂತ ಅವರಿಗೆ ಹುಬ್ಬಳ್ಳಿ-ಧಾರವಾಡ ಡಿಸಿಪಿಯಾಗಿಯೂ ಮುಂದುವರೆಯಲು ಹೆಚ್ಚುವರಿ ಹೊಣೆ ನೀಡಿ ಸರಕಾರ ಆದೇಶ ಹೊರಡಿಸಿರುವುದು ಪೊಲೀಸ್ ಇಲಾಖೆಯಲ್ಲಿಯೂ ಎಲ್ಲವೂ ಸರಿಯಿಲ್ಲ.
ರಾಜ್ಯದ ಬಿಜೆಪಿ ಸರಕಾರದಲ್ಲಿ ಹೊಂದಾಣಿಕೆ ಕೊರತೆ ಇರುವುದು ಎದ್ದು ಕಾಣುತ್ತಿದೆ ಎಂದು ಪೊಲೀಸರೇ ಮಾತನಾಡಿಕೊಳ್ಳುವಂತಾಗಿದೆ ಎಂದರೆ ತಪ್ಪಾಗಲಾರದು.