ಧಾರವಾಡ prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಮಾವ ಗಂಗಣ್ಣ ಶಿಂತ್ರಿ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಪಾಲ್ಗೊಳ್ಳಲು ಸಿಬಿಐ ವಿಶೇಷ ನ್ಯಾಯಾಲಯ ಭಾನುವಾರ ಅನುಮತಿ ನೀಡಿದೆ.
ಧಾರವಾಡ ಜಿಲ್ಲೆಯ ಮೂರನೇ ಅಧಿಕ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿಎಂ. ಗಂಗಾಧರ ಅವರು ಈ ಮಹತ್ವದ ಆದೇಶ ನೀಡಿದರು.
ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಭಾನುವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಅಳಿಯ ವಿನಯ ಕುಲಕರ್ಣಿ ಗೆ ಮಧ್ಯಾಹ್ನ ಮೂರು ಮೂವತ್ತರಿಂದ ಸಂಜೆ ಆರು ಮೂವತ್ತರ ವರೆಗೆ ಕೇವಲ ಮೂರು ಗಂಟೆಗಳ ಕಾಲ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಾರೆ.
ಈ ಕುರಿತು ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿನ ಅಧಿಕಾರಿಗಳಿಗೆ ಹಾಗೂ ಬೆಳಗಾವಿ ಜಿಲ್ಲೆಯ ಎಸ್ಪಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಗಂಗಣ್ಣ ಶಿಂತ್ರಿ ಅವರ ಹಿರಿಯ ಮಗಳು ಶಿವಲೀಲಾ ವಿನಯ ಕುಲಕರ್ಣಿ, ಮಗ ಶಿವಾ ಶಿಂತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಗಂಗಣ್ಣ ಅಗಲಿದ್ದಾರೆ.
ಗಂಗಣ್ಣ ಶಿಂತ್ರಿ ಈ ಹಿಂದೆ ಧಾರವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದ ಬಹು ಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ ಜಾಮೀನು ಮೇಲೆ ಹೊರಬಂದಿದ್ದರು.
ನಾಲ್ವರು ಪಾಲುದಾರರ ಪೈಕಿ ಇವರು ಒಬ್ಬರಾಗಿದ್ದರು.
ಮೃತರ ಅಂತ್ಯಕ್ರಿಯೆ ಬೆಳಗಾವಿ ಜಿಲ್ಲೆಯ ಸವದತ್ತಿ ಹತ್ತಿರ ಇರುವ ಯಡ್ರಾಮಿ ತೋಟದಲ್ಲಿ ಜ. 24 ರಂದು ಸಾಯಂಕಾಲ 5.30 ಕ್ಕೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಅವರ ಅಳಿಯ, ಮಾಜಿ ಸಚಿವ ವಿನಯ ಕುಲಕರ್ಣಿ ಗೆ ಈ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಭಾಗವಹಿಸಲು ನ್ಯಾಯಾಲಯ ಅವಕಾಶ ನೀಡಿದೆ.
ವಿನಯ ಕುಲಕರ್ಣಿ ಧಾರವಾಡ ಜಿಲ್ಲೆಯ ಬಿಜೆಪಿ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಂದ ನ. 7 ರಂದು ಬಂಧನಕ್ಕೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.