ಬೆಂಗಳೂರು prajakiran.com : ಕನ್ನಡದ ಸಿನಿಮಾ ರಂಗದಲ್ಲಿ ತಮ್ಮದೆ ಆದ ವಿಶಿಷ್ಟ ಛಾಪು ಮೂಡಿಸಿದ್ದ ‘ದೊಡ್ಮನೆ’ ‘ಯುವರತ್ನ’ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (46) ಅವರು ಶುಕ್ರವಾರ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಪುನೀತ್ ಅವರು ತಮ್ಮ 46ನೇ ವಯಸ್ಸಿನಲ್ಲಿಯೇ ತಮ್ಮ ಅಪಾರ ಪ್ರಮಾಣದ ಅಭಿಮಾನಿಗಳನ್ನು ಅಗಲಿರುವುದು ಬರ ಸಿಡಿಲು ಬಡಿದಂತಾಗಿದೆ.
ಶುಕ್ರವಾರ ಬೆಳಗ್ಗೆ ಜಿಮ್ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವೇಳೆ, ಕುಸಿದು ಬಿದ್ದಿದ್ದರು.
ಈ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ವೈದ್ಯರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ನಟ ದರ್ಶನ, ಹಿರಿಯ ನಟಿ ಜಯಮಾಲಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ,
ನಟ ರವಿಚಂದ್ರನ್ ಸೇರಿದಂತೆ ಅನೇಕ ಗಣ್ಯರು ವಿಕ್ರಮ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಅಭಿಮಾನಿಗಳಿಗೆ ಅವರ ಪಾರ್ಥಿವ ಶರೀರ ದರ್ಶನಕ್ಕೆ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಪುನೀತ್ ರಾಜಕುಮಾರ ಅವರು ಹಿನ್ನೆಲೆ ಗಾಯಕ ಮತ್ತು ಅದ್ಭುತವಾದ ನಿರೂಪಕರೂ ಆಗಿದ್ದರು.
ಅವರು ಬಾಲನಟನಾಗಿ ಬೆಟ್ಟದ ಹೂವು ಮೂಲಕ ಸಿನಿ ರಂಗಕ್ಕೆ ಪ್ರವೇಶ ಮಾಡಿದ್ದರು. ಪ್ರೀತಿಯ ಅಪ್ಪಾಜಿ ವರನಟ ಡಾ. ರಾಜಕುಮಾರ್ ಅವರೊಂದಿಗೆ ಭಕ್ತ ಪ್ರಹ್ಲಾದ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಮೋಘ ನಟನೆ ಮೂಲಕ ಹೆಸರು ಮಾಡಿದ್ದರು.
ಆ ಬಳಿಕ ಅಪ್ಪು, ವೀರ ಕನ್ನಡಿಗ, ರಾಜಕುಮಾರ, ನಟಸಾರ್ವಭೌಮ, ದೊಡ್ಮನೆ ಹುಡ್ಗ, ಪೃಥ್ವಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿ ಪವರ್ ಸ್ಟಾರ್ ಆಗಿ ಮಿಂಚಿದ್ದರು.
ಅವರ ಅಗಲಿಕೆ ಇಡೀ ಕನ್ನಡ ಸಿನಿಮಾ ರಂಗ ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಸಿನಿ ರಂಗಕ್ಕೆ ಆಘಾತ ತಂದಿದೆ.