ಧಾರವಾಡ ಪ್ರಜಾಕಿರಣ.ಕಾಮ್ : ಮನೆಯವರನ್ನು ಥಳಿಸಿ ಚಿನ್ನದ ಆಭರಣಗಳನ್ನು ದೋಚಿದ ಘಟನೆ ಸಮೀಪದ ನವಲೂರಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಗ್ರಾಮದ ಅಶೋಕ ಕದಂ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿನ ಅಂದಾಜು ೧೦೦ ಗ್ರಾಂ.ನಷ್ಟು ಚಿನ್ನದ ಆಭರಣಗಳನ್ನು ದೋಚಲಾಗಿದೆ.
ಮನೆಯಲ್ಲಿ ಅಶೋಕ ಕದಂ ಮತ್ತು ಅವರ ಪತ್ನಿ ಲಲಿತಾ ಮಲಗಿದ್ದ ಸಮಯದಲ್ಲಿ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಮನೆಯ ಕಿಟಕಿ ಮೂಲಕ ದರೋಡೆಕೋರರು ಒಳ ಪ್ರವೇಶಿಸಿದ್ದಾರೆ.
ಆಗ ಅಶೋಕ ಮತ್ತು ಅವರ ಪತ್ನಿ ಎಚ್ಚರಗೊಂಡಿದ್ದಾರೆ.
ಆಗ ನಾಲ್ಕು ಜನರಿದ್ದ ದರೋಡೆಕೋರರು ಕಬ್ಬಿಣದ ಸರಳುಗಳಿಂದ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ.
ದರೋಡೆಕೋರರ ಹಲ್ಲೆಯಿಂದ ಹೆದರಿ ಕೂಗಾಡುವಷ್ಟರಲ್ಲಿ ಮನೆಯ ಅಲ್ಮೇರಾದಲ್ಲಿದ್ದ ಚಿನ್ನದ ಆಭರಣಗಳನ್ನು ದೋಚಿಕೊಂಡು ಕಾಲ್ಕಿತ್ತಿದ್ದಾರೆ.
ಅಶೋಕ ಕದಂ ಮತ್ತು ಅವರ ಪತ್ನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರ ಜೊತೆ ಎಸಿಪಿ ಬಿ.ಎಸ್.ಬಸವರಾಜ, ವಿದ್ಯಾಗಿರಿ ಠಾಣೆಯ ಸಿಪಿಐ ಸಂಗಮೇಶ ದಿಡಿಗಿನಾಳ ಮತ್ತು ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.