ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣ ಕುರಿತು ಸಿಬಿಐ ಅಧಿಕಾರಿಗಳ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಶಿಗ್ಗಾಂವಿಯ ಕಾಂಗ್ರೆಸ್ ಮುಖಂಡ ಶಿವಯೋಗಿ ಹಿರೇಮಠ ನನ್ನು ಎರಡನೇ ದಿನವೂ ವಿಚಾರಣೆ ನಡೆಸಿದ ಸಿಬಿಐ ತಂಡ ಮಹತ್ವದ ಮಾಹಿತಿ ಕಲೆ ಹಾಕಿದೆ.
ಬುಧವಾರವೂ ಸಂಜೆ ವೇಳೆ ವಿಚಾರಣೆಗೆ ಆಗಮಿಸಿದ್ದ ಹಿರೇಮಠನನ್ನು ಗುರುವಾರವೂ ವಿಚಾರಣೆ ಮುಂದುವರೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಇದೇ ವೇಳೆ ಹುಬ್ಬಳ್ಳಿಯ ಮಹಿಳೆಯೊಬ್ಬರನ್ನು ಸಿಬಿಐ ಅಧಿಕಾರಿಗಳು ಒಂದು ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಆ ಮಹಿಳೆ ಯಾರು, ಅವರನ್ನು ಈ ಪ್ರಕರಣದಲ್ಲಿ ಯಾಕೆ ವಿಚಾರಣೆ ನಡೆಸಲಾಗಿದೆ. ಅವರು ಯಾರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ಅವರು ಸಿಬಿಐ ಎದುರು ಏನೆಲ್ಲಾ ಮಾಹಿತಿ ನೀಡಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಅವರ ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳ ತಂಡ ಸಾಕಷ್ಟು ಮಹತ್ವದ ಮಾಹಿತಿ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಹಲವು ಪ್ರಭಾವಿಗಳಿಗೆ ಮತ್ತಷ್ಟುಕಂಟಕ ಎದುರಾಗಲಿದೆ ಎಂದು ಗೊತ್ತಾಗಿದೆ.