ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಹಾಗೂ ಹುಬ್ಬಳ್ಳಿ-ಧಾರವಾಡ ನೀರು ಸರಬರಾಜು ಗುತ್ತಿಗೆ ಹಾಗೂ ಹಂಗಾಮಿ ನೌಕರರ ನೇತೃತ್ವದಲ್ಲಿ ಪಕ್ಷಾತೀತ ಹೋರಾಟ
ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಬೆಂಬಲಕ್ಕೆ ಮನವಿ
ಎಲ್ ಆಂಡ್ ಟಿ ಕಂಪನಿ, ಮಹಾನಗರ ಪಾಲಿಕೆ ಆಯುಕ್ತರ ಅಹಂದಿಂದಾಗಿ ಅವಳಿನಗರಕ್ಕೆ ಸರ್ಮಪಕ ನೀರು ನಿರ್ವಹಣೆ ಆಗದಿರುವ ಹಿನ್ನೆಲೆಯಲ್ಲಿ ಬುಗಿಲೆದ್ದ ಹೋರಾಟ
ಧಾರವಾಡ ಪ್ರಜಾಕಿರಣ. ಕಾಮ್: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 82 ವಾರ್ಡ್ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.
ಆದರೆ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಎಲ್ ಆಂಡ್ ಟಿ ಕಂಪನಿಯ ಒಣ ಪ್ರತಿಷ್ಟೆಯಿಂದ ಅವಳಿನಗರದ ಜನತೆ ಅಕ್ಷರಶಃ ಕುಡಿಯುವ ನೀರಿಗಾಗಿ ಹಲವಾರ ದಿನಗಳಿಂದ ಪರದಾಡುವಂತಾಗಿದೆ.
ಅವಳಿನಗರದ ನುರಿತ 650 ಜಲಮಂಡಳಿ ನೌಕರರು ಕಳೆದ ಹಲವು ದಿನಗಳಿಂದ ಕೆಲಸವಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಎಳು ತಿಂಗಳಿಂದ ಸಂಬಳವಿಲ್ಲದೆ, ಬದುಕು ದುಸ್ಥರಗೊಂಡಿದೆ.
ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಎಲ್ ಆಂಡ್ ಟಿ ಕಂಪನಿ ಈ ನೌಕರರನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳದೆ, ಅವರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿರುವುದನ್ನು ಖಂಡಿಸಿ ಹಾಗೂ ಅವಳಿನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ
ಡಿ. 19 ರಂದು ಸೋಮವಾರ ಬೆಳಗ್ಗೆ 11 ಗಂಟೆಯಿಂದ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಹಾಗೂ ಹುಬ್ಬಳ್ಳಿ-ಧಾರವಾಡ ನೀರು ಸರಬರಾಜು ಗುತ್ತಿಗೆ ಮತ್ತು ಹಂಗಾಮಿ ನೌಕರರ ನೇತೃತ್ವದಲ್ಲಿ 650 ಜಲಮಂಡಳಿ ನೌಕರರು ಅವರ ಕುಟುಂಬಸ್ಥರು ಹಾಗೂ ವಿಶೇಷವಾಗಿ ನಗರದ ವಿವಿಧ ಬಡಾವಣೆಯ ಜನತೆಯ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಪಕ್ಷಾತೀತ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಬೆಂಬಲ ನೀಡುವಂತೆ ಬಸವರಾಜ ಕೊರವರ ಮನವಿ ಮಾಡಿದ್ದಾರೆ.