ಧಾರವಾಡ prajakiran.com : ಕಳೆದ 20 ವರ್ಷಗಳಿಂದ 600 ಕ್ಕೂ ಹೆಚ್ಚು ಜನ ಜಲಮಂಡಳಿಯ ಹಂಗಾಮಿ ನೌಕರರಾಗಿ ನೀರು ಸರಬರಾಜು ಮಾಡುತ್ತಾ ಬಂದಿದ್ದಾರೆ.
ಆದರೆ, ಏಕಾಏಕಿ ಅವರನ್ನು ವಜಾಗೊಳಿಸುತ್ತಿರುವುದು ಸರಿಯಲ್ಲ. ಕೋರ್ಟ್ ಆದೇಶ ಪಾಲಿಸದೆ ಅನ್ಯಾಯ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದೀಪಕ ಚಿಂಚೋರೆ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇವರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿ ಹೊಸದಾಗಿ ನೌಕರರನ್ನು ತೆಗೆದುಕೊಳ್ಳುತ್ತಿರುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಎಲ್ ಆಂಡ್ ಟಿ ಕಂಪನಿಗೆ ವಹಿಸುವುದು ಸರಿಯಲ್ಲ. ಈಗಾಗಲೇ ಒಂದು ದೊಡ್ಡ ಕಂಪನಿ ಓಡಿಹೋಗಿದೆ. ಇದು ಕೂಡ ಅಷ್ಠ್ಟೇ. ರಾಜ್ಯದ ಬಿಜೆಪಿ ಸರ್ಕಾರ ಪರ್ಸಂಟೇಜ್ ರಾಜಕಾರಣ ಮಾಡುವುದನ್ನು ಬಿಡಬೇಕೆಂದರು.
2003 ರಲ್ಲಿ ಪಾಲಿಕೆಯಿಂದ ಜಲಮಂಡಳಿಗೆ ನೀರು ಸರಬರಾಜು ಹಸ್ತಂತರವಾದಾಗ ಅವರನ್ನು ಹಸ್ತಾಂತರಿಸಿದಂತೆ ಈಗಲೂ ಸಹ ಮೊದಲು ಮಹಾನಗರ ಪಾಲಿಕೆಗೆ ಹಸ್ತಾಂತರಿಸಬೇಕು ಎಂದರು.
ನಂತರ ಮಹಾನಗರ ಪಾಲಿಕೆಯಿಂದ ನಿಯೋಜನೆ ಮೂಲಕ ಎಲ್ ಆಂಡ್ ಟಿ ಕಂಪನಿಗೆ ಹಸ್ತಾಂತರಿಸಬೇಕು.
ಈ ಬೇಡಿಕೆ ಈಡೇರಿದರೆ ನೀರು ಸರಬರಾಜು ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಿದ್ದಾರೆ ಎಂದು ದೀಪಕ ಚಿಂಚೋರೆ ವಿವರಿಸಿದರು.
ಇಂಡಸ್ಟ್ರೀಯಲ್ ಟ್ರಿಬ್ಯೂನಲ್ದಲ್ಲಿ ಪ್ರಕರಣ ನಡೆದು 2019 ರಲ್ಲಿ ಅಂತಿಮ ತೀರ್ಪು ಬಂದಿದ್ದು, ನಾವೀಗ ಮಂಡಳಿಯ ಹಂಗಾಮಿ ನೌಕರರೆಂದಾಗ್ಯೂ ಮೈಸೂರಲ್ಲಿ 2012 ರಲ್ಲಿಯೇ ನೀಡಿರುವಂತೆ ಇವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಬೇಡಿಕೆಯನ್ನು ತಕ್ಷಣವೇ ಈಡೇರಿಸಬೇಕು ಎಂದರು.
ಎಲ್ಲಾ ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚಿಸುವುದಾಗಿ ಹೇಳಿದ ಅವರು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟ ಅನಿರ್ವಾವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯ ಸದಸ್ಯರಾದ ಮಯೂರ ಮೋರೆ, ಮಾಜಿ ಸದಸ್ಯರಾದ ಮಹಾವೀರ ಶಿವಣ್ಣವರ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.