ಪಾಲಿಕೆ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ ಇಲ್ಲ;
ತಪ್ಪು ಸಂದೇಶ ಬಿತ್ತರಿಸದಂತೆ ಜಿಲ್ಲಾಡಳಿತ ಮನವಿ
ಧಾರವಾಡ (prajakiran. com) ಸ.3: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಚುನಾವಷಾ ಆಯೋಗದ ಆದೇಶದಂತೆ ಬ್ಯಾಲೆಟ್ ಯುನಿಟ್(ಬಿ.ಯು) ಮತ್ತು ಕಂಟ್ರೋಲ್ ಯುನಿಟ್(ಸಿಯು) ಗಳಿರುವ ಮತಯಂತ್ರಗಳನ್ನು ಮಾತ್ರ ಬಳಸಲಾಗುತ್ತಿದೆ. ಈ ಚುನಾವಣೆಯಲ್ಲಿ ವಿವಿಪ್ಯಾಟ್ ಬಳಕೆ ಇಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಹಾನಗರಪಾಲಿಕೆಯ ಪ್ರಸ್ತುತ ಚುನಾವಣೆಯಲ್ಲಿ ಮತಯಂತ್ರಗಳನ್ನು ಮಾತ್ರ ಬಳಸಲಾಗುತ್ತಿದ್ದು, ವಿವಿಪ್ಯಾಟ್ ಬಳಸುತ್ತಿಲ್ಲ.
ಈ ಕುರಿತು ಮತಗಟ್ಟೆ ಸಿಬ್ಬಂದಿಗಳಿಗೆ ಸಮರ್ಪಕವಾಗಿ ತರಬೇತಿ ನೀಡಲಾಗಿದ್ದು, ರಾಜಕೀಯ ಪಕ್ಷಗಳ ಸಭೆ ಜರುಗಿಸಿ, ಮಾಹಿತಿ ನೀಡಲಾಗಿದೆ.
ಮತ್ತು ಮಾಧ್ಯಮಗಳ ಮೂಲಕ ಈ ಕುರಿತು ವ್ಯಾಪಕ ಪ್ರಚಾರ ನೀಡಲಾಗಿದೆ.
ಪ್ರತಿ ಮತಗಟ್ಟೆಗೆ ಒಂದು ಮತಯಂತ್ರ ನೀಡಲಾಗಿದ್ದು, ಯಾವುದೇ ರೀತಿಯ ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ಪರಿಶೀಲಿಸಿ ಸರಿಪಡಿಸಲು ಅಗತ್ಯ ತಜ್ಞರನ್ನು ಮತ್ತು ಅಗತ್ಯವಿದ್ದಲ್ಲಿ ತಕ್ಷಣಕ್ಕೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಹೆಚ್ಚುವರಿ ಮತಯಂತ್ರಗಳನ್ನು ಜಿಲ್ಲಾಡಳಿತ ಸಿದ್ದವಿಟ್ಟುಕೊಂಡಿದೆ.
ಆದರೂ ಕೆಲವು ಮಾಧ್ಯಮಗಳಲ್ಲಿ ವಿವಿಪ್ಯಾಟ್ ಬಳಸುತ್ತಿಲ್ಲ ಎಂದು ತಪ್ಪು ಸಂದೇಶ ಬಿತ್ತರವಾಗುತ್ತಿರುವ ಕುರಿತು ದೂರುಗಳು ಬರುತ್ತಿವೆ.
ಚುನಾವಣಾ ಸಂದರ್ಭದಲ್ಲಿ ತಪ್ಪು ಮಾಹಿತಿ, ತಾತ್ಕಾಲಿಕ ತಾಂತ್ರಿಕ ಸಮಸ್ಯೆಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುವ ಮೂಲಕ ಮತದಾರರಲ್ಲಿ ಗೊಂದಲ ಮೂಡಿಸಬಾರದು ಮತ್ತು ಮಹಾನಗರಪಾಲಿಕೆ ಚುನಾವಣೆ ಶಾಂತಿಯುತವಾಗಿ, ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಬೆಳಿಗ್ಗೆಯಿಂದ ಮಹಾನಗರದಲ್ಲಿ ಶಾಂತಿಯುತವಾಗಿ ಮತದಾನ ಆರಂಭವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.