ರಾಯಚೂರು prajakiran.com :
ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬ ದಲ್ಲಾಳಿ, ಭ್ರಷ್ಟಾಚಾರಿಯನ್ನ ಸಚಿವರನ್ನಾಗಿ ಮಾಡಲಾಗಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ನಗರದಲ್ಲಿ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
“ಸಂಪುಟ ವಿಸ್ತರಣೆ, ಪುನರ್ ರಚನೆ ಸಿಎಂ ಪರಮಾಧಿಕಾರ. ಈ ಸಮಯದಲ್ಲಿ ಹಲವು ಒತ್ತಾಯಗಳು ಬರುವುದು ಸಹಜ. ಆದ್ರೆ ಭ್ರಷ್ಟರನ್ನ ಸಚಿವರನ್ನಾಗಿ ಮಾಡುವ ಒತ್ತಾಯ ಸಾಮಾನ್ಯವಾಗಿ ಉದ್ಭವಿಸುವುದಿಲ್ಲ ಎಂದು ಕುಟುಕಿದರು.
ಭ್ರಷ್ಟನನ್ನ, ದಲ್ಲಾಳಿಯನ್ನ ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ ಎಂದು ಸಚಿವ ಸಿ.ಪಿ.ಯೋಗೇಶ್ವರ ವಿರುದ್ಧ ನೇರವಾಗಿ ಹರಿಹಾಯ್ದರು.
ಈತ ಭ್ರಷ್ಟಾಚಾರವನ್ನ ಹೊತ್ತು ಮಲಗಿದ್ದಾನೆ. 9,731 ಜನರ ಬಳಿ ಮೆಗಾಸಿಟಿಗೆ ನೂರಾರು ಕೋಟಿ ಹಣವನ್ನ ಕೊಳ್ಳೆ ಹೊಡೆದಿದ್ದಾನೆ. ಭ್ರಷ್ಟನ ವಿರುದ್ದ ಮೋಸ ಹೋದವರು ನ್ಯಾಯಾಲಯಕ್ಕೆ ಹೋಗಿದ್ದಾರೆ.
ನ್ಯಾಯಾಲಯ ಸಿರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ಗೆ ರೆಫರ್ ಮಾಡಿದೆ.
ಸಾವಿರಾರು ಜನರಿಗೆ ಟೋಪಿ ಹಾಕಿದವನಿಗೆ ಸಚಿವ ಸ್ಥಾನದ ಪಟ್ಟ ನೀಡಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಬಿ.ಎಸ್.
ಯಡಿಯೂರಪ್ಪ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದೆವು. 17 ಜನ ಕ್ಷಿಪ್ರ ಕ್ರಾಂತಿ ಮಾಡಿ ಹೊರ ಬಂದಿದ್ದೆವು. ಒಳ್ಳೆಯದಾಗುತ್ತೆ ಅನ್ನುಕೊಂಡಿದ್ದೇವೆ. ಆದ್ರೆ ಈ ಬೆಳವಣಿಗೆ ಕಂಡು ಬೇಜಾರಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಸಚಿವರಾಗಿದ್ದ ನಾಗೇಶ್ರನ್ನ ಕಿತ್ತು ಹಾಕಿದ್ದಾರೆ. ಹಿಂದುಳಿದ ವರ್ಗದ ಮುನಿರತ್ನನಿಗೆ ಅವಕಾಶವಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.