ಧಾರವಾಡ prajakiran.com ; ನಗರದ ಪ್ರಮುಖ ಮಾರುಕಟ್ಟೆಯಾಗಿರುವ ಸುಪರ್ ಮಾರ್ಕೆಟ್ ವ್ಯಾಪಾರಸ್ಥರ ಸಮಸ್ಯೆಗಳ ಕುರಿತು ಚರ್ಚಿಸಲು ೨೪ ಗಂಟೆಗಳಲ್ಲಿ ವ್ಯಾಪಾರಸ್ಥರ ಸಭೆ ಕರೆಯಬೇಕು.
ಮತ್ತು ಈ ವಿಷಯದಲ್ಲಿ ಕಾನೂನು ಉಲ್ಲಂಘನೆ ಮಾಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ ಮಾಡಬೇಕು ಎಂದು ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಜಿಲ್ಲಾ ಆಡಳಿತವನ್ನು ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪರ್ ಮಾರ್ಕೆಟ್ನಲ್ಲಿನ ಬೀದಿ ಬದಿ ವ್ಯಾಪಾರಸ್ಥರ ಮೇಲೆ ನಿಯಮಗಳನ್ನು ಉಲ್ಲಂಘಿಸಿ ದಬ್ಬಾಳಿಕೆ ನಡೆಸುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೆಳಿದರು.
೧೯೭೭ ರಿಂದ ಧಾರವಾಡದಲ್ಲಿ ಸುಪರ ಮಾರ್ಕೆಟ್ನಲ್ಲಿನ ಬೀದಿ ಬದಿ ವ್ಯಾಪಾರಸ್ಥರ ಜೊತೆ ಮಹಾನಗರ ಪಾಲಿಕೆಯು ಸಮನ್ವಯತೆ ಸಾಧಿಸಿಲ್ಲ.
ಹೀಗಾಗಿ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ೧೯೮೬ ರಿಂದ ೨೦೨೧ ವರೆಗೆ ರಾಜ್ಯದ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ನಿಂದ ಕಾಲಕಾಲಕ್ಕೆ ಬಂದಂತ ಆದೇಶಗಳನ್ನು ಗಮನಿಸಿದಾಗ, ಅರ್ಜಿದಾರರಾದ ಪ್ರಗತಿ ಚಿಕ್ಕ ವರ್ತಕರ ಸಂಘ ಮತ್ತು ಎದುರುದಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಧ್ಯೆದ ವ್ಯಾಜ್ಯದಲ್ಲಿ (ರಿಟ್ ಪಿಟಿಷನ್ ನಂ.೭೪೬೬/೧೯೮೬) ಮಹಾನಗರ ಪಾಲಿಕೆಯು ಮುಚ್ಚಳಿಕೆ ಸಲ್ಲಿಸಿದೆ.
ಈ ಮುಚ್ಚಳಿಕೆಯಲ್ಲಿ ವ್ಯಾಪಾರಸ್ಥರ ದೈನಂದಿನ ವ್ಯವಹಾರಕ್ಕೆ ಅಡಚಣಿ ಆಗದಂತೆ ಅಭಿವೃದ್ದಿಪಡಿಸಬೇಕು.
ಮತ್ತು ಅವರಿಗೆ ಬೇಕಾದ ಸೌಲಭ್ಯಗಳಿಗಾಗಿ ಮಹಾನಗರ ಪಾಲಿಕೆಗೆ ಮನವಿ ಮಾಡಿದಾಗ ಅವುಗಳನ್ನು ಪರಿಗಣಿಸಬೇಕು ಎಂದು ಹೇಳಲಾಗಿದೆ.
ಈ ಕುರಿತು ಸಧ್ಯ ಎರಡು ಅರ್ಜಿಗಳ ವಿಚಾರಣೆ ಕೂಡ ಕೋರ್ಟ್ನಲ್ಲಿ ನಡೆಯುತ್ತಿದೆ. ವಾಸ್ತವ ಹೀಗಿದ್ದರೂ ಪಾಲಿಕೆ ಅಧಿಕಾರಿಗಳು ದಿಢೀರನೇ ಬಂದು ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಲು ಮುಂದಾಗುತ್ತಿದೆ.
ಪಾಲಿಕೆಯ ಈ ಅಧಿಕಾರಿಗಳಿಗೆ ಪೊಲೀಸರು ಸಾಥ್ ನೀಡುತ್ತಿದ್ದಾರೆ. ಇದು ನ್ಯಾಯಾಲಯದ ಆದೇಶಗಳ, ನಗರಾಭಿವೃದ್ಧಿ ಕಾಯ್ದೆಗಳ ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಇಂತಹ ದೌರ್ಜನ್ಯ ವಿರೋಧಿಸಲು ಹೊರಟವರನ್ನು ಅಧಿಕಾರಿಗಳು ಅತ್ಯಂತ ಹಗುರವಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದೆರಡು ತಿಂಗಳಲ್ಲಿ ೭೦ ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಲಾಗಿದೆ. ಆ ಕುಟುಂಗಳ ಗತಿ ಏನು ಎಂದು ಅವರು ಪ್ರಶ್ನಿಸಿದರು.
ಇತ್ತೀಚೆಗೆ ನಗರದಲ್ಲಿ ಪಾಲಿಕೆಯ ಸಹಾಯಕ ಆಯುಕ್ತ ಸಬರದ ನೇತೃತ್ವದಲ್ಲಿ ವ್ಯಾಪಾರಸ್ಥರನ್ನು ತೆರವುಗೊಳಿಸಲು ಮುಂದಾಗಿತ್ತು.
ಕಾಯ್ದೆ ಅರಿಯ ಸಬರದ ಅವರು ಕಾನೂನು ವಿರುದ್ಧ ಮತ್ತು ಅಮಾನವೀಯವಾಗಿ ವರ್ತಿಸಿದ್ದಾರೆ. ಮತ್ತು ಎಸಿಪಿ ಅನುಷಾ ಜಿ. ಕೂಡ ತಮ್ಮ ಸಿಬ್ಬಂದಿ ಮೂಲಕ ವ್ಯಾಪಾರಸ್ಥರನ್ನು ಬೆದರಿಸುವ ಕಾರ್ಯ ಮಾಡಿದ್ದಾರೆ.
ಆದ್ದರಿಂದ ಇವರಿಬ್ಬರನ್ನು ತಕ್ಷಣವೇ ಅಮಾನತ್ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು,ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಮೌನವಹಿಸುವ ಮೂಲಕ ಅಮಾಯಕ ವ್ಯಾಪಾರಸ್ಥರನ್ನು ಅಲಕ್ಷಿಸಿದ್ದಾರೆ ಎಂದು ಆಕ್ರೋಷವ್ಯಕ್ತಪಡಿಸಿದರು.
ಸುಪರ್ ಮಾರ್ಕೆಟ್ ಕುರಿತು ಚರ್ಚಿಸಲು ೨೪ ಗಂಟೆಗಳಲ್ಲಿ ವ್ಯಾಪಾರಸ್ಥರ ಸಭೆ ಕರೆಯಬೇಕು.ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ ಮಾಡಬೇಕು ಎಂದು ನೀರಲಕೇರಿ ಆಗ್ರಹಿಸಿದರು.
ಮುಖಂಡರಾದ ಶಿವಶಂಕರ ಹಂಪಣ್ಣವರ, ಶ್ರೀಶೈಲಗೌಡ ಕಮತರ, ನಾರಾಯಣ ಲದ್ವಾ, ಬಸವರಾಜ ಜಾಧವ,ಮಹ್ಮದಲಿ ಗೂಡುಬಾಯಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು.