ಧಾರವಾಡ prajakiran.com : ಗೋ ಪ್ರೇಮಿ ದಿವಂಗತ ಶಿವು ಉಪ್ಪಾರ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಶ್ರೀ ರಾಮ ಸೇನೆ ಮುಖಂಡರು ಮನವಿ ಸಲ್ಲಿಸಿದರು.
ಗೋವುಗಳನ್ನು ರಕ್ಷಿಸಲು ಹೊರಾಟ ಮಾಡುತ್ತಾ ಬಂದಿದ್ದ ಯುವಕ ಶಿವು ಉಪ್ಪಾರ 25.05.2019 ರಂದು ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ APMC ಆವರಣದಲ್ಲಿ ಸಂಶಯಾಸ್ಪದವಾಗಿ ನೇಣುಬಿಗಿದ ಸ್ಥಿತಿಯಲ್ಲಿ ಶವ ದೊರಕಿದ್ದರ ಬಗ್ಗೆ ಪ್ರಾಮಾಣಿಕ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗಿದೆ.
ಈ ಸಾವು ಸಂಭವಿಸಿ ವರ್ಷಗಳೇ ಕಳೆದರೂ ಇನ್ನೂ ತನಿಖೆ ಪೂರ್ಣಗೊಂಡಿಲ್ಲ ಹಾಗೂ ಸಾವಿನ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಶಿವು ಉಪ್ಪಾರ ಕೊಲೆ ಪ್ರಕರಣ ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.
ಶಿವು ಉಪ್ಪಾರ ಮಾಡಿದ ವಿಡಿಯೋದಲ್ಲಿ ಹೇಳಿದ ಗೋ ಹಂತಕ ಬೇಪಾರಿ 50 ಲಕ್ಷ ಸುಪಾರಿ ಕೊಟ್ಟು ಶಿವು ಉಪ್ಪಾರ ಅವರನ್ನು ಕೊಲ್ಲುವ ಬಗ್ಗೆ ಹೇಳಿದ್ದರೂ ಆತನ ಬಂಧನದ ಬಗ್ಗೆ ಮಾಹಿತಿಯಿಲ್ಲ.
ಶಿವು ಹೇಳಿದ ಅನಧಿಕೃತ ಜಾನುವಾರು ಸಾಗಾಟದ ಬಗ್ಗೆ ತನಿಖೆಯಾಗಿಲ್ಲ.
ಅಲ್ಲದೆ, ಶಿವು ಉಪ್ಪಾರ ಉಲ್ಲೇಖಿಸಿದ ವಾಹನಗಳ ಜಪ್ತಿಯೂ ಸಹ ಆಗಿಲ್ಲ. ಇನ್ನೂ ಅನೇಕ ಅಂಶಗಳ ಬಗ್ಗೆ ತನಿಖೆ ನಡೆಯಬೇಕಿತ್ತು. ಆದರೆ ದುರ್ದೈವದ ಸಂಗತಿಯೆಂದರೆ ಈ ವಿಷಯಗಳನ್ನು ಮುಚ್ಚಿಹಾಕಲು ಕಾಣದ ಕೈಗಳು ಪ್ರಯತ್ನಿಸುತ್ತಿದ್ದು ತಕ್ಷಣವೇ ಈ ಪ್ರಕರಣದ ಸತ್ಯಾಸತ್ಯತೆ ಹೊರಗೆ ಬರಲು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷ ಈಶ್ವರಗೌಡ ಪಾಟೀಲ್, ಧಾರವಾಡ ನಗರ ಪ್ರಮುಖ ವಿಶ್ವಾಸ, ಮಂಜುನಾಥ ಹಿರೇಮಠ, ಶ್ರೀನಿವಾಸ ಭೋವಿ, ಅನೀಲ ಸೊಂಡೂರ ಮನವಿ ಸಲ್ಲಿಸಿದರು.